ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ರ ವಯಸ್ಸಿನ ಯುವತಿಯನ್ನು ಲಾಡ್ಜ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ (20) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 55 ಸಾವಿರ ರೂ. ದಂಡ ವಿಧಿಸಿದೆ. ನ್ಯಾಯಾಧೀಶ ಮಾನು ಕೆ.ಎಸ್. ಶನಿವಾರ ಈ ತೀರ್ಪು ನೀಡಿದ್ದಾರೆ.
ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯ ಕಾಡಿನ ಬಿಜಾಪುರ ಕಾಲನಿ ನಿವಾಸಿ ಸಮೀರ್ ಎಂಬಾತ ಅಪ್ರಾಪ್ತ ಯುವತಿಯ ತಾಯಿ ನಡೆಸುತ್ತಿದ್ದ ಹೊಟೇಲ್ಗೆ ಕೋಳಿ ಮಾಂಸದ ಲೈನ್ಸೇಲ್ ಮಾಡುತ್ತಿದ್ದ. ಯುವತಿ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿದ್ದು, ಆಕೆಯ ಪರಿಚಯ ಮಾಡಿಕೊಂಡ ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದ.
2024ರ ಜೂ.24ರಂದು ಬಾಲಕಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಲಾಡ್ಜ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಅಲ್ಲಿಂದ ಕಾರಿನಲ್ಲಿ ಆಕೆಯನ್ನು ಚಿತ್ರದುರ್ಗಕ್ಕೆ ಮತ್ತು ಬಸ್ಸಿನಲ್ಲಿ ಬೆಂಗಳೂರಿಗೆ ಕರೆದು ಕೊಂಡುಹೋಗಿದ್ದ. ನಂತರ ಖಾಸಗಿ ಬಸ್ಸಿನಲ್ಲಿ ಮುಂಬೈಗೆ ಕರೆದೊಯ್ದಿದ್ದ. ಅಲ್ಲಿ ಬಾಡಿಗೆ ಮನೆ ಹುಡುಕಾಟ ನಡೆಸಿ ಸಿಗದಿದ್ದಾಗ ಮತ್ತೆ ಬೆಂಗಳೂರಿಗೆ ತೆರಳಿ, ಅಲ್ಲಿಂದ ಮತ್ತೆ ಮಂಗಳೂರು ಸರ್ಕಾರಿ ಬಸ್ ನಿಲ್ದಾಣ ತಲುಪಿದ್ದ. ಅಲ್ಲಿ ಹಾಜರಿದ್ದ ಸುರತ್ಕಲ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆಗಿನ ಸುರತ್ಕಲ್ ಇನ್ಸ್ಪೆಕ್ಟರ್ ರಘು ನಾಯ್ಕ್ ಮತ್ತು ಎಸ್ಸೈ ಮಹೇಶ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ದಂಡದ ಮೊತ್ತ 55 ಸಾವಿರ ರೂ. ಮತ್ತು ಕಾನೂನು ಸೇವಾ ಪ್ರಾಧಿಕಾರ ಹೆಚ್ಚುವರಿಯಾಗಿ 3.45 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಯುವತಿಗೆ ನೀಡುವಂತೆ ತೀರ್ಪಿನಲ್ಲಿ ತಿಸಲಾಗಿದೆ. ಇದರಲ್ಲಿ 1.5 ಲಕ್ಷವನ್ನು ತಕ್ಷಣ ಪಾವತಿಸಬೇಕು ಮತ್ತು 2.5 ಲಕ್ಷ ರೂ. ಸಂತ್ರಸ್ತೆ ಹೆಸರಿನಲ್ಲಿ 3 ವರ್ಷ ಎಫ್ಡಿ ಇಡುವಂತೆ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಎರಡನೇ ಆರೋಪಿ ಶಿವಮೊಗ್ಗದ ಲಾಡ್ಜ್ನ ರಿಸೆಪ್ಶನಿಸ್ಟ್ ನಾಗರಾಜ್ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.




