ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಏಜೆನ್ಸಿಯೊಂದು ಸುಮಾರು 300ಕ್ಕೂ ಅಧಿಕ ಮಂದಿಗೆ 9 ಕೋಟಿಗೂ ಅಧಿಕ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರೂ ಕ್ರಮಕೈಗೊಳ್ಳದೆ ಮತ್ತಷ್ಟು ವಂಚನೆ ಮಾಡಲು ಅವಕಾಶಕೊಟ್ಟ ಆರೋಪದ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಬೆಂದೂರ್ವೆಲ್ನಲ್ಲಿ ಒಂದು ವರ್ಷದಿಂದೀಚೆಗೆ ಕಾರ್ಯಾಚರಿಸುತ್ತಿದ್ದ ಹಯರ್ ಗ್ಲೋ ಎಲಿಗೆಂಟ್ ಓವರ್ಸೀಸ್ ಇಂಟರ್ನ್ಯಾಷನಲ್ ಪ್ರೈ.ಲಿ. ಸಂಸ್ಥೆಯು ನ್ಯೂಜಿಲೆಂಡ್ನಲ್ಲಿರುವ ವಲರಿಸ್ ಎಂಬ ರಿಗ್ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜಿಲ್ಲೆಯ 185ಕ್ಕೂ ಅಧಿಕ ಮಂದಿಯಿಂದ ತಲಾ 1.65 ಲಕ್ಷ ರೂ.ನಿಂದ 1.80 ಲಕ್ಷ ರೂ.ವರೆಗೆ ಪಡೆದು ವಂಚಿಸಿದೆ.ಕರ್ನಾಟಕ ಮಾತ್ರವಲ್ಲದೆ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳ ಜನರೂ ವಂಚನೆಗೆ ಒಳಗಾಗಿದ್ದಾರೆ. ಇದೀಗ ವಂಚನೆಗೊಳಗಾದವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ವಂಚನೆಯ ಕರಾಳ ಮುಖ ಅನಾವರಣಗೊಂಡಿದೆ.
ಮಂಗಳೂರಿನ ಕಂಕನಾಡಿಯಲ್ಲಿ ಕಚೇರಿಯನ್ನು ಹೊಂದಿದ್ದ ಖಾಸಗಿ ಸಂಸ್ಥೆ ನ್ಯೂಜಿಲೆಂಡ್ನ VALARIS ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ದಕ್ಷಿಣಕನ್ನಡ ಜಿಲ್ಲೆಯ 185ಕ್ಕೂ ಹೆಚ್ಚು ಮಂದಿ ಕಂಪನಿಯನ್ನು ಉದ್ಯೋಗಕ್ಕಾಗಿ ಸಂಪರ್ಕಿಸಿದ್ದರು. ಪಕ್ಕದ ಉಡುಪಿ ಜಿಲ್ಲೆ, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಸಂಸ್ಥೆಯನ್ನು ಸಂಪರ್ಕಿಸಿದ್ದರು.
ಸಂಸ್ಥೆಯು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1ಲಕ್ಷದ 85 ಸಾವಿರ ರೂ., ಎಜೆಂಟ್ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ರೂಪಾಯಿ ಹಾಗೂ ಬೇರೆ ಬೇರೆ ರಾಜ್ಯದ ಏಜೆನ್ಸಿಗಳ ಮೂಲಕ ತಲಾ 5ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿರುವ ಆರೋಪ ಸಂಸ್ಥೆಯ ಮೇಲಿದೆ. ಉದ್ಯೋಗಾಕಾಂಕ್ಷಿಗಳು ಹಣವನ್ನು ಆನ್ಲೈನ್ ಮೂಲಕ ಸಂಸ್ಥೆಯ 14 ಬ್ಯಾಂಕ್ ಖಾತೆಗಳಿಗೆ ಪಾವತಿದ್ದಾರೆ. ನವೆಂಬರ್ನಲ್ಲಿ ಸಂಸ್ಥೆಯ ಗ್ರೆಟೆಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ಹಾಗೂ ಚೈತ್ರಾ ಎಂಬವರು ಸಂದರ್ಶನಕ್ಕೆ ಬರುವಂತೆ ತಿಳಿಸಿದ್ದರು. ನವೆಂಬರ್ ಕೊನೆಯ ವಾರದಲ್ಲಿ ಮೆಡಿಕಲ್ ಫಿಟ್ನೆಸ್ ತಪಾಸಣೆ ನಡೆಸಲಾಗಿತ್ತು. ಜನವರಿ ಮೊದಲ ವಾರದಲ್ಲಿ ಕೆಲಸಕ್ಕೆ ಸೇರಲು ಕಾಂಟ್ರ್ಯಾಕ್ಟ್ಸ್ಗೆ ಸಹಿ ಹಾಕಲು ಕಚೇರಿಗೆ ಬರುವಂತೆ ತಿಳಿಸಿದ್ದರೆ, ಜನವರಿ ಕೊನೆಯ ವಾರದಲ್ಲಿ ವೀಸಾ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಅಲ್ಲದೆ, ಕೊರಿಯರ್ ಮೂಲಕ ವೀಸಾ ಬರಲಿದೆ ಎಂದು ತಿಳಿಸಿತ್ತು.
ಎಪ್ರಿಲ್ ಕೊನೆಯ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೊರಿಯರ್ ಬಂದಿತ್ತು. ಅದನ್ನು ತೆರೆದು ನೋಡಿದಾಗ, ತಾವೇ ನೀಡಿದ್ದ ಪಾಸ್ಪೋರ್ಟ್, ಫೋಟೋ, ಆನ್ವಲಪ್ ನೋಡಿ ಅವರು ಶಾಕ್ ಆಗಿದ್ದರು. ಆಗ, ತಾವು ಮೋಸ ಹೋಗಿರುವ ಬಗ್ಗೆ ಉದ್ಯೋಗಕಾಂಕ್ಷಿಗಳಿಗೆ ಮನವರಿಕೆಯಾಗಿದೆ. ಸದ್ಯ ಸಂಸ್ಥೆಯ ವಿರುದ್ಧ ಸಂತ್ರಸ್ತರು ಕದ್ರಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯ ಪ್ರಮುಖ ಮಸೀಉಲ್ಲಾ ಅತೀಉಲ್ಲಾ ಖಾನ್, ಗ್ರೆಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ವಿರುದ್ಧ ದೂರು ನೀಡಿದ್ದಾರೆ. ಅದರಂತೆ, ಪ್ರಕರಣ ದಾಖಲಾಗಿದೆ.
ಉದ್ಯೋಗಾಕಾಂಕ್ಷಿಗಳು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಸಿಸಿಬಿಗೆ ವರ್ಗಾಯಿಸಿ, ಹಯರ್ ಗ್ಲೋ ಸಂಸ್ಥೆಯ ಮುಂಬಯಿ ನಿವಾಸಿ ಮಸೀವುಲ್ಲಾಅತೀವುಲ್ಲಾ ಖಾನ್, ಮಂಗಳೂರು ಮೂಲದ ಸಿಬ್ಬಂದಿ ಗ್ರೆಟೆಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ಹಾಗೂ ಚೈತ್ರಾ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂಸ್ಥೆಯ ಮಾಲೀಕ ಮುಂಬಯಿ ನಿವಾಸಿ ಮಸೀವುಲ್ಲಾ ಅತೀವುಲ್ಲಾ ಖಾನ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಮಂಗಳೂರು ಕಚೇರಿಗೆ ದಾಳಿ ಮಾಡಿ ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಸಂಬಂಧ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ. ನಕಲಿ ಸಂಸ್ಥೆಯ ಬಗ್ಗೆ ಆಫೀಸ್ ಪ್ರೊಟೆಕ್ಟರ್ ಎಮಿಗ್ರೇಟ್ಸ್ ಮೊದಲೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೂ ಮಾಹಿತಿ ನೀಡಿತ್ತು. ಅದರಂತೆ, ಸಂಸ್ಥೆಯ ವಿರುದ್ದ ತನಿಖೆ ನಡೆಸುವಂತೆ ಕದ್ರಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಪೊಲೀಸ್ ಕಮೀಷನರ್ ಆದೇಶಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ತನಿಖೆಗೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿದೆ.
ಪೊಲೀಸ್ ಅಧಿಕಾರಿಗಳು ನಕಲಿ ಸಂಸ್ಥೆಯಿಂದಲೇ ಹಣ ಪಡೆದು ದೋಖಾ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಕದ್ರಿ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್, ಆ ಸಂದರ್ಭ ಪಿಎಸ್ಐ ಆಗಿದ್ದ ಉಮೇಶ್ ಅವರನ್ನು ಅಮಾನತು ಮಾಡಲಾಗಿದೆ.