ಪ್ರೇಮ ವೈಫಲ್ಯ, ಆನ್ಲೈನ್ ಜೂಜಾಟ ಸೇರಿ ಇತರ ಕಾರಣಗಳಿಂದಾಗಿ ಕಳೆದ 3 ವರ್ಷಗಳಲ್ಲಿ ರಾಜ್ಯದ ವಿವಿಧ ಸರಕಾರಿ ಶಾಲೆ,
ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಒಟ್ಟು 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ| ಎಚ್. ಸಿ.ಮಹದೇವಪ್ಪ ಹೇಳಿದರು.
ಕಾಂಗ್ರೆಸ್ನ ತಿಪ್ಪಣ್ಣಪ್ಪ ಕಮಕನೂರ ಪ್ರಶ್ನೆಗೆ ಉತ್ತರಿಸಿ, ಸರಕಾರಿ ಶಾಲೆ (ಶಾಲಾ ಶಿಕ್ಷಣ ಇಲಾಖೆ) 10, ವಸತಿ ಶಾಲೆ (ಕ್ರೈಸ್) 5 ಮತ್ತು ವಿದ್ಯಾರ್ಥಿ ನಿಲಯದ (ಸಮಾಜ ಕಲ್ಯಾಣ ಇಲಾಖೆ) 12 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ನಿಲಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಯಾವುದೇ ರೀತಿಯ ಒತ್ತಡದ ಜೀವನ, ರ್ಯಾಗಿಂಗ್ ಅಥವಾ ಮೂಲಭೂತ ಸೌಕರ್ಯಗಳ ಕೊರತೆ ಮುಖ್ಯವಾಗಿ ಕಾರಣವಾಗಿರುವುದಿಲ್ಲ ಎಂದು ತಿಳಿಸಿದರು.
ಈಗಾಗಲೇ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಸರಕಾರದ ಅಧೀನದಲ್ಲಿರುವ ವಸತಿ ಶಾಲೆ/ ಕಾಲೇಜುಗಳ,ಅಲ್ಪಸಂಖ್ಯಾಕರ ವಸತಿ ಶಾಲೆಗಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಆತ್ಮಹತ್ಯೆ ತಡೆ ನೀತಿ-2025 ಕರಡು ಸಿದ್ಧಪಡಿಸಿದ್ದು ಅಂತಿಮ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ನೀಡಿದರು.




