ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಯುವಕನೋರ್ವನನ್ನು ಬೆಂಗಳೂರಿನಲ್ಲಿ 3 ತಿಂಗಳ ಕಾಲ ಅಕ್ರಮವಾಗಿ ಕೂಡಿ ಹಾಕಿ ಹಲ್ಲೆಗೈದ ಘಟನೆ ನಡೆದಿದೆ.
ಈ ಬಗ್ಗೆ ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಅಪಹರಣಕ್ಕೊಳಗಾದ ಸಫಾ ನಗರ ಮಠ ನಿವಾಸಿ ಮೊಹಮ್ಮದ್ ಮುಸ್ತಫಾ ಎಂಬವರು ನೀಡಿದ ದೂರಿನನ್ವಯ ಬಿಎನ್ಎಸ್ ಸೆಕ್ಷನ್ 118(1), 127(4), 140(2), 351(2),352,3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಠಾಣಾ ಪೊಲೀಸರು, ಅಜಯ್, ಕಾರ್ತಿಕ್, ಜೀವನ್ ಎಂಬ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಲಕ್ಷಣ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಚೀಫ್ ಫೈನಾಸ್ಸಿಂಗ್ ಆಫೀಸರ್ ಆಗಿ ಸಂತ್ರಸ್ಥ ಯುವಕ ಕೆಲಸಕ್ಕಿದ್ದು ಸ್ನೇಹಿತ ಮೊಹಮ್ಮದ್ ರಾಜೀ ಎಂಬಾತನ ಜೊತೆ ಇಂದಿರಾನಗರದ ಬಳಿಯಿರುವ ಲಾಡ್ಜೊಂದರಲಿ ವಾಸವಾಗಿದ್ದ. ಅಲ್ಲಿಗೆ ಬಂದ ಕಾರ್ತಿಕ್ ಎಂಬವರು ಮೊಹಮ್ಮದ್ ರಾಜೀ ಜೊತೆ ಮಾತುಕತೆ ನಡೆಸುತ್ತಿದ್ದ. ಆ ದಿನ ಮೊಹಮ್ಮದ್ ರಾಜೀಯು ತನಗೇನೋ ಕೆಲಸವಿದೆಯೆಂದು ಕಾರ್ತಿಕ್ ಜೊತೆ ಹೇಳಿ ಹೊರಟು ಹೋಗಿದ್ದ. ಮರುದಿನವಾದರೂ ಮೊಹಮ್ಮದ್ ರಾಜೀ ಬಂದಿರಲಿಲ್ಲ. ಮರುದಿನ ಅವ ಯಾಕೆ ಬರಲಿಲ್ಲವೆಂದು ವಿಚಾರಿಸಲು ಬಂದ ಕಾರ್ತಿಕ್ ಮತ್ತು ಲಕ್ಷ್ಮಣ್ ನೀನು ನನ್ನ ಜೊತೆ ಬಾ ಎಂದು ಸಂತ್ರಸ್ಥನನ್ನು ಕರೆದೊಯ್ದಿದ್ದ. ಅಲ್ಲಿಂದ ಕಾರಿನಲ್ಲಿ ದೇವನಹಳ್ಳಿಗೆ ಸಂತ್ರಸ್ಥ ಯುವಕನನ್ನು ಕರೆದುಕೊಂಡು ಬಂದಿದ್ದು, ಅಲ್ಲಿ ಫೈನಾನ್ಸ್ವೊಂದರಲ್ಲಿ ಕೂಡಿ ಹಾಕಿದ್ದರು. ಅಲ್ಲಿಗೆ ಅಜಯ್ ಎಂಬಾತ ಬಂದು “ನಿನ್ನ ಗೆಳೆಯ ಮೊಹಮ್ಮದ್ ರಾಜೀ ಎಂಬಾತ ನನ್ನಿಂದ ಆರು ಲಕ್ಷವನ್ನು ಸಾಲ ಪಡೆದಿದ್ದಾನೆ. ಅದನ್ನು ಹಿಂದುರಿಗಿಸದೇ ನಿನ್ನನ್ನು ಬಿಡುವುದಿಲ್ಲ ಎಂದು ದೈಹಿಕವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡುತ್ತಿದ್ದನು ಎಂದು ಸಂತ್ರಸ್ಥ ದೂರಿನಲ್ಲಿ ತಿಳಿಸಿದ್ದಾನೆ. ಕೊಠಡಿಯಲ್ಲಿ ಕೂಡಿ ಹಾಕಿ ದಿನ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಲ್ಲಿ ಇವರೊಂದಿಗೆ ಜೀವನ್ ಎಂಬಾತನೂ ಸೇರಿಕೊಂಡಿದ್ದಾನೆ. ಅ.5ರಂದು ರಾತ್ರಿ 8 ಗಂಟೆಗೆ ಸಂತ್ರಸ್ಥ ಯುವಕನಿಗೆ ಡೆಡ್ಲೈನ್ ನೀಡಿ ದುಡ್ಡು ಬಂದಿಲ್ಲ ಅಂದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು. ಬಳಿಕ ಈ ವಿಷಯ ಮನೆಯವರಿಗೆ ಗೊತ್ತಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವರ್ತರಾದ ದೇವನಹಳ್ಳಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಸಂತ್ರಸ್ಥ ಯುವಕನನ್ನು ರಕ್ಷಣೆ ಮಾಡಿದ್ದಾರೆ.



