ಮೂಡುಬಿದಿರೆ: ಪಾಲಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಬಿಟಿ ರೋಡ್ ವಿದ್ಯಾಗಿರಿ ಶಾಲೆಯ ಪಕ್ಕ ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಸಾಯಂಕಾಲ ಬಂಧಿಸಿದ್ದಾರೆ.

ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಅಲಂಗಾರು ಉಳಿಯ ನಿವಾಸಿ ರಾಜು ಅವರ ಪುತ್ರ, ಪವನ್ ಕುಮಾರ್ ಬಂಧಿತ ಆರೋಪಿ. ಈತ ಮಾ.8ರಂದು ಸಾಯಂಕಾಲ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ನಗರದಲ್ಲಿ ಟ್ಯೂಶನ್ ಮುಗಿಸಿ ಸೈಕಲ್ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾನೆ.
ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಬಾಲಕಿ ಆತನಿಂದ ತಪ್ಪಿಸಿಕೊಂಡು ಸೈಕಲ್ ಅಲ್ಲೇ ಬಿಟ್ಟು, ಮನೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾಳೆ. ತಕ್ಷಣ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ.
ಮೂಡುಬಿದಿರೆ ಅಸುಪಾಸಿನಲ್ಲಿ ಇತ್ತೀಚೆಗೆ ಇಂತದಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿವಿಧ ಮೂಲಗಳಿಂದ ಈತನ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಮಂಗಳವಾರ ಅಲಂಗಾರು ಬಳಿ ಈತನನ್ನು ಬಂಧಿಸಿದ್ದಾರೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಅಖಿಲ್ ಅಹಮದ್, ನಾಗರಾಜ್ ಲಂಬಾಣಿ, ಮೊಹಮ್ಮದ್ ಹುಸೇನ್, ಮೊಹಮ್ಮದ್ ಇಕ್ಬಾಲ್ ಕಾರ್ಯಾಚರಣೆ ನಡೆಸಿದರು. ಆರೋಪಿ ವಿರುದ್ಧ ಫೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ.