ಮಂಗಳೂರು: ರಸ್ತೆ ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣನಾದ ಗೂಡ್ಸ್ ಟೆಂಪೋ ಚಾಲಕ ಸಿದ್ದಲಿಂಗನ ಗೌಡ ವಿ. ಪೊಲಿಸ್ ಪಾಟೀಲ್ (35) ಎಂಬಾತನಿಗೆ 9 ತಿಂಗಳು ಜೈಲು ಹಾಗೂ 9 ಸಾವಿರ ರೂ. ದಂಡ ವಿಧಿಸಿ ಜೆಎಂಎಫ್ಸಿ 3ನೇ ನ್ಯಾಯಾಲಯ ಆದೇಶ ನೀಡಿದೆ.

2019ರ ಡಿ. 1ರಂದು ನಗರದ ಕದ್ರಿ ಕಂಬಳದಲ್ಲಿ ಈ ಘಟನೆ ಸಂಭವಿಸಿತ್ತು. ವಿನೋದ್ ಕುಮಾರ್ ಚಲಾಯಿಸುತ್ತಿದ್ದ ಆಟೋದಲ್ಲಿ ಮಹಿಳೆ ಶೈಲಜಾ ರಾವ್ (55) ಪ್ರಯಾಣಿಸುತ್ತಿದ್ದರು. ಆಗ ಸಿದ್ದಲಿಂಗನ ಗೌಡ ಗೂಡ್ಸ್ ಟೆಂಪೋವನ್ನು ನಿರ್ಲಕ್ಷéದಿಂದ ಚಲಾಯಿಸಿಕೊಂಡು ಬಂದು ಆಟೋಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಶೈಲಜಾ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಆಗ ಪೊಲೀಸ್ ನಿರೀಕ್ಷರಾಗಿದ್ದ ಗೋಪಾಲಕೃಷ್ಣ ಭಟ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್ಸಿ 3ನೇ ನ್ಯಾಯಾಲಯ ನ್ಯಾಯಾಧೀಶರಾದ ಸುರೇಶ್ ಇ.ಎಸ್. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟೆಂಪೋ ಚಾಲಕನಿಗೆ ಎ. 22ರಂದು 9 ತಿಂಗಳ ಜೈಲು ಹಾಗೂ 9 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.