ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ವೇದಿಕೆ ಮೇಲೆಯೇ ಧಾರವಾಡದ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರತ್ತ ಸಿಎಂ ಕೈ ಎತ್ತಿದ್ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

ಬೆಲೆ ಏರಿಕೆ ವಿರೋಧಿಸಿ ಇಂದು ಕಾಂಗ್ರೆಸ್ ಪ್ರತಿಭಟನಾ ಸಭಾ ಆಯೋಜಿಸಿತ್ತು. ಸಿಎಂ ಮಾತನಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟಿಸಿದರು.
ಪಾಕ್ ಜೊತೆ ಯುದ್ಧ ಅನಿವಾರ್ಯವಲ್ಲ ಎಂಬ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ. ಈ ವೇಳೆ ಸಂಯಮ ಕಳೆದುಕೊಂಡ ಸಿಎಂ ಹೆಚ್ಚುವರಿ ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಸಮಾವೇಶಕ್ಕೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆಗಮಿಸಿದ್ದರು. ಬೇರೆ ನಾಯಕರ ಭಾಷಣದವರೆಗೆ ಸುಮ್ಮನೇ ಕುಳಿತಿದ್ದ ಕಾರ್ಯಕರ್ತೆಯರು ಸಿಎಂ ಭಾಷಣ ಮಾಡುವಾಗ ಕಪ್ಪು ಪಟ್ಟಿಯನ್ನು ತೋರಿಸಿ ಪ್ರತಿಭಟಿಸಿದರು.
ಇದ್ದಕ್ಕಿದ್ದಂತೆ ತನ್ನ ಮುಂಭಾಗವೇ ಪ್ರತಿಭಟನೆ ನೋಡಿ ಸಿಎಂ ಒಂದು ಕ್ಷಣ ಭಾಷಣ ಮಾಡುವುದನ್ನು ನಿಲ್ಲಿಸಿದರು. ನಿಲ್ಲಿಸಿದ ಬಳಿಕ ಯಾರದು ಎಸ್ಪಿ ಎಂದು ಹೇಳಿ ವೇದಿಕೆಗೆ ಬರುವಂತೆ ಹೇಳಿದ್ದಾರೆ. ಹೆಚ್ಚುವರಿ ಎಸ್ಪಿ ಬರುತ್ತಿದ್ದಂತೆ ಏನ್ರೀ ಇದು, ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿ ಕೈ ಎತ್ತಿ ಸಿಟ್ಟು ಹೊರಹಾಕಿದ್ದಾರೆ.
ನಂತರ ಸಚಿವ ಎಂಬಿ ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿದರು.