ಮಂಗಳೂರು: ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸಲು ಹೇಳಿದ್ದಕ್ಕೆ ಸಿಟ್ಟಾದ ಆಟೋ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ತೊಕ್ಕೊಟ್ಟು ಜಂಕ್ಷನ್ನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲಕ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನು ಸ್ವಲ್ಪ ಬದಿಗೆ ಸರಿಸುವಂತೆ ಚಾಲಕ ಬಶೀರ್ ನಲ್ಲಿ ಹೇಳಿದ್ದಾರೆ. ಇಷ್ಟಕ್ಕೇ ಕುಪಿತಗೊಂಡ ಚಾಲಕ ಬಶೀರ್ ತನ್ನ ಸಹಚರ ರಿಕ್ಷಾ ಚಾಲಕರೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಅಶ್ವಿನ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಬೇಕರಿಯೊಳಗಿದ್ದ ಅಶ್ವಿನ್ ಅವರ ತಾಯಿ ಮತ್ತು ಸಿಬ್ಬಂದಿ ಯುವತಿ ರಿಕ್ಷಾ ಚಾಲಕರನ್ನು ತಡೆದಿದ್ದು ಅವರನ್ನೂ ತಳ್ಳಿ ಹಲ್ಲೆಗೆ ಮುಂದಾಗಿದ್ದಾರೆ.
ಈ ವೇಳೆ ಪಕ್ಕದ ಶಿವಸಾಗರ್ ಹೊಟೇಲಿನ ಮಾಲಕ ಅವರು ಮಧ್ಯ ಪ್ರವೇಶಿಸಿ ಬೇಕರಿ ಮಾಲೀಕನಿಗೆ ಹಲ್ಲೆಗೆ ಮುಂದಾಗಿದ್ದ ರಿಕ್ಷಾ ಚಾಲಕರನ್ನು ಅಂಗಡಿಯಿಂದ ಹೊರ ತಳ್ಳಿದ್ದಾರೆ. ಘಟನೆಯ ದೃಶ್ಯವು ಬೇಕರಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೇಕರಿ ಮಾಲಕ ಅಶ್ವಿನ್ ಅವರು ತನ್ನ ಮತ್ತು ತಾಯಿ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ನೀಡಿರುವ ರಿಕ್ಷಾ ಚಾಲಕ ಬಶೀರ್ ಮತ್ತು ಇಷಾನ್ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.