ಒಂದು ವಾರದಲ್ಲಿ ಹಣವನ್ನು ಡಬಲ್ ಮಾಡಿ ಕೊಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂ. ವಂಚಿಸಿ ಆಂಧ್ರಪ್ರದೇಶ ಮೂಲದ ದಂಪತಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ನಿವಾಸಿಗಳಾದ ಬೊಗ್ಗು ಶ್ರೀರಾಮಲು- ಪುಷ್ಪಾ ವಂಚಿಸಿ ಎಸ್ಕೇಪ್ ಆಗಿರುವ ದಂಪತಿ. ಈ ದಂಪತಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರಿಗೆ ವಂಚಿಸಿ ಪರಾರಿಯಾಗಿದ್ದಾರೆ. ಡಬ್ಲಿಂಗ್ ಆಸೆಗೆ ರೇಣುಕಮ್ಮ ಎಂಬವರು ಜಮೀನು ಮಾರಾಟ ಮಾಡಿ 33 ಲಕ್ಷ ರೂ. ನೀಡಿದ್ದರು. ಅಲ್ಲದೇ ಮೀನಾ 40 ಲಕ್ಷ ರೂ., ಪ್ರಿಯಾಂಕ 50 ಲಕ್ಷ ರೂ. ನೀಡಿದ್ದಾರೆ. ಇನ್ನು ಟಿ ತಿರುಮಲೇಶ್ ಎಂಬವರು 17 ಲಕ್ಷ ರೂ. ನೀಡಿ ಮೋಸ ಹೋಗಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಹಾಕಿ, ಡಬಲ್ ಮಾಡುವ ಎಂದು ವಂಚಕ ದಂಪತಿ ನಂಬಿಸಿದ್ದರು. ಅಲ್ಲದೇ ಅವರ ಮನೆಯ ರೂಂನಲ್ಲಿ ಹಣದ ಕಂತೆಗಳನ್ನು ಜೋಡಿಸಿ ವೀಡಿಯೋ ಮಾಡಿ ಕಳಿಸಿ ನಂಬಿಸಿದ್ದರು. ಸದ್ಯ 17 ಲಕ್ಷ ರೂ. ಕಳೆದುಕೊಂಡ ಟಿ. ತಿರುಮಲೇಶ್ ಜಗಳೂರು ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಜಗಳೂರು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.




