ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಇದೀಗ ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಬರೋಬ್ಬರಿ 10 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ರವಿವಾರ ನಡೆದಿದೆ.
ಅಮಾಸೆಬೈಲು ಸಮೀಪದ ಕೊಟ್ಟಕ್ಕಿ ನಿವಾಸಿ, ಆನಂದ ಪೂಜಾರಿಯವರು ಅಮಾಸೆಬೈಲು ಮಾರುಕಟ್ಟೆಯಲ್ಲಿ ದಿನಸಿ ಅಂಗಡಿ ಮತ್ತು ಕೋಳಿ ಫಾರಂ ನಡೆಸುತ್ತಿದ್ದು, ಅಡಿಕೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ನುಗ್ಗಿದ ಕಳ್ಳರು ಕಪಾಟಿನ ಬಾಗಿಲು ಮುರಿದು ಒಳಗಿದ್ದ ಹಣವನ್ನು ದೋಚಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಕಳುವಾದ 10 ಲಕ್ಷ ರೂಪಾಯಿ ಮೊತ್ತವು ಆನಂದ ಪೂಜಾರಿಯವರು ಇತ್ತೀಚೆಗಷ್ಟೇ ಅಡಿಕೆ ಮಾರಾಟ ಮಾಡಿ ತಂದಿದ್ದ ಹಣ ಎನ್ನಲಾಗಿದೆ. ಕಳ್ಳರಿಗೆ ಈ ಹಣದ ಬಗ್ಗೆ ಮೊದಲೇ ಮಾಹಿತಿ ಇತ್ತೇ ಎಂಬ ಸಂಶಯವೂ ವ್ಯಕ್ತವಾಗಿದೆ.
ಕಳ್ಳರು ಅತ್ಯಂತ ಚಾಲಾಕಿತನದಿಂದ ವರ್ತಿಸಿದ್ದು, ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಸಿಸಿಟಿವಿ ಡಿವಿಆರ್ ಅನ್ನು ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಲಾಗಿದೆ.




