ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 6, 2026 ರಂದು ಸಂಜೆ 7:45ರಿಂದ ರಾತ್ರಿ 10:15ರ ನಡುವೆ, ಹೇರಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಪ್ರದೇಶದ ನಿವಾಸಿ 77 ವರ್ಷದ ಮಂಜುನಾಥ ರಾವ್ ಅವರು ತಮ್ಮ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಅಪರಿಚಿತರು ಮನೆಯ ಮುಂದಿನ ಬಾಗಿಲು ಒಡೆದು ಒಳನುಗ್ಗಿ, ಬೆಡ್ ರೂಮ್ನಲ್ಲಿದ್ದ ಗೋಡ್ರೇಜ್ ಅಲಮಾರಿಯನ್ನು ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡಿದ್ದರು.
ಕಳುವಾದ ವಸ್ತುಗಳಲ್ಲಿ ಸುಮಾರು 47 ಗ್ರಾಂ ಚಿನ್ನದ ಸರ-ಪೆಂಡೆಂಟ್, 32 ಗ್ರಾಂ ಬಳೆಗಳು, 6 ಗ್ರಾಂ ಬೆಂಡೋಲೆ, 4 ಗ್ರಾಂ ಉಂಗುರ, 3 ಗ್ರಾಂ ಬೆಂಡೋಲೆ, 250 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ₹49,000 ನಗದು ಸೇರಿದ್ದು, ಒಟ್ಟು ಮೌಲ್ಯ ₹14,67,000 ಆಗಿದೆ.
ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಸಂಖ್ಯೆ 45/2026ರಂತೆ BNS ಕಲಂ 334(4), 305 ಅಡಿ ಪ್ರಕರಣ ದಾಖಲಾಗಿತ್ತು.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಸಿ.ಪಿ.ಐ ಗೋಪಿಕೃಷ್ಣ ಹಾಗೂ ಪಿ.ಎಸ್.ಐ ಅಶೋಕ್ ಮಾಳಾಬಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿ ಪ್ರವೀಣ್ ಕುಮಾರ್ ಕೆ (ಬಾರಕೂರು ನಿವಾಸಿ) ಅವರನ್ನು ಬಂಧಿಸಿದೆ. ಆರೋಪಿಯಿಂದ ₹14 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹7,500 ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




