ಉತ್ತರ ಪ್ರದೇಶ : ಇತ್ತೀಚಿನ ಸ್ಮಾರ್ಟ್ಫೋನ್ ಯುಗದಲ್ಲಿ ಎಲ್ಲವೂ ಆಯೋಮಯ ಅನ್ನೋದಕ್ಕೆ ಇಂತಹ ಘಟನೆಗಳೇ ಜ್ವಲಂತ ಸಾಕ್ಷಿ. ಸಾಮಾಜಿಕ ಮಾಧ್ಯಮಕ್ಕಾಗಿ ವೀಡಿಯೊ ಚಿತ್ರೀಕರಿಸಲು ಹೋಗಿ 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಐವರು ಮಕ್ಕಳ ಪೈಕಿ ಓರ್ವ ಬಾಲಕ ಮೃತಪಟ್ಟು, ಉಳಿದವರು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ನಡೆದಿದೆ.
ಶನಿವಾರ ಮಧ್ಯಾಹ್ನ ಐವರು ಮಕ್ಕಳು ಅಪಾಯಕಾರಿ ಸಾಹಸದ ರೀಲ್ಸ್ ಮಾಡಲು ನೀರಿನ ಟ್ಯಾಂಕ್ ಹತ್ತಿದ್ದರು. ವಾಪಸ್ ಇಳಿಯುವಾಗ ಏಣಿಯು ಮುರಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸುಮಾರು 50 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರು. ಈ ಅಪಘಾತದಲ್ಲಿ 13 ವರ್ಷದ ಸಿದ್ಧಾರ್ಥ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಬ್ಬರು ಮಕ್ಕಳು ಟ್ಯಾಂಕ್ ಮೇಲ್ಭಾಗದಲ್ಲೇ ಸಿಲುಕಿಕೊಂಡಿದ್ದರು. ಮಳೆ ಮತ್ತು ಜೌಗು ಪ್ರದೇಶದ ಕಾರಣ ಕ್ರೇನ್ ಬಳಸಲು ಸಾಧ್ಯವಾಗದಿದ್ದಾಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ರಾಜ್ಯ ಸರಕಾರ ಭಾರತೀಯ ವಾಯುಪಡೆಯ ಸಹಕಾರ ಕೋರಿದೆ. ಈ ಹಿನ್ನಲೆ ಭಾರತೀಯ ವಾಯುಪಡೆಯ Mi-17 V5 ಹೆಲಿಕಾಪ್ಟರ್ ನಿಯೋಜಿಸಲಾಯಿತು. ಸುಮಾರು 16 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಭಾನುವಾರ ಬೆಳಿಗ್ಗೆ 5:20ಕ್ಕೆ ಇಬ್ಬರೂ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ವಿಮಾನವು ಬೆಳಗ್ಗೆ 5:20ರ ಸುಮಾರಿಗೆ ಕಾನ್ಶಿರಾಮ್ ಅವಾಸಿಯ್ ಕಾಲೋನಿಯನ್ನು ತಲುಪಿ, ಬದುಕುಳಿಯುವ ಹಂಬಲದಿಂದ ಸಹಾಯಕ್ಕಾಗಿ ಕಾದು ಕುಳಿತಿದ್ದ ಇಬ್ಬರನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಿ, ಗೋರಖ್ಪುರಕ್ಕೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಈ ಘಟನೆ ಉಳಿದವರಿಗೆ ಪಾಠವಾಗಲಿ, ಇನ್ಯಾರೂ ಇಂತಹ ತಪ್ಪನ್ನು ಮಾಡದಿರಲಿ ಎಂಬುದೇ ಹೆತ್ತವರ ಕಳಕಳಿ.




