ಪಾಟ್ನಾ: ಭಾನುವಾರ ಸಂಜೆ ಬಿಹಾರದ ಮುಜಫರ್ಪುರ ಬಳಿ ಮೂರು ಪ್ಯಾಸೆಂಜರ್ ರೈಲುಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಕಲ್ಲು ತೂರಾಟವು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದು, ಈ ಪ್ರದೇಶದಲ್ಲಿ ರೈಲ್ವೆ ಭದ್ರತೆಯ ಬಗ್ಗೆ ಭಾರೀ ಕಳವಳವನ್ನು ಹುಟ್ಟುಹಾಕಿದೆ. ಭಾರತೀಯ ರೈಲ್ವೆಯ ಪ್ರೀಮಿಯಂ ಸೆಮಿ-ಹೈ-ಸ್ಪೀಡ್ ಸೇವೆಗಳಲ್ಲಿ ಒಂದಾದ ಪಾಟಲಿಪುತ್ರ-ಗೋರಖ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಘಟನೆಯ ಸಮಯದಲ್ಲಿ ರೈಲಿನ ಮೂರು ಬೋಗಿಗಳ ಕಿಟಕಿಗಳು ಛಿದ್ರಗೊಂಡಿವೆ.
ಮುಜಫರ್ಪುರ ಜಂಕ್ಷನ್ ಮತ್ತು ರಾಮದಯಾಳು ನಗರ ನಿಲ್ದಾಣದ ನಡುವೆ ಈ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಜೌಲಿಯಾ ಮತ್ತು ಖಬ್ರಾ ಬಳಿ ರೈಲನ್ನು ಟಾರ್ಗೆಟ್ ಮಾಡಲಾಗಿದ್ದು, ಅಲ್ಲಿ ಹಲವಾರು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಅಪಘಾತದಲ್ಲಿ 3 ಬೋಗಿಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.
ವಂದೇ ಭಾರತ್ ರೈಲಿನಲ್ಲಿ ನಡೆದ ಘಟನೆಯ ಸ್ವಲ್ಪ ಸಮಯದ ನಂತರ ಪಾಟ್ನಾ-ಜಯನಗರ ಇಂಟರ್ಸಿಟಿ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 14006, ಲಿಚ್ಚವಿ ಎಕ್ಸ್ಪ್ರೆಸ್ ಕೂಡ ಅದೇ ಮಾರ್ಗದಲ್ಲಿ ವಿವಿಧ ಸ್ಥಳಗಳಲ್ಲಿ ಕಲ್ಲು ತೂರಾಟಕ್ಕೆ ಒಳಗಾದವು. ಈ ಘಟನೆಗಳು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಭೀತಿಯನ್ನುಂಟುಮಾಡಿದವು. ಈ ಘಟನೆ ಬಗ್ಗೆ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಒಳಗೆ ಅಳವಡಿಸಲಾದ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗಳು ವರದಿಯಾದ ನಂತರ ಭದ್ರತಾ ಸಿಬ್ಬಂದಿ ರೈಲ್ವೆ ಹಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದಾರೆ. ರೈಲ್ವೆ ಹಳಿಗಳ ಬಳಿ ಆಟವಾಡುತ್ತಿದ್ದ ಮಕ್ಕಳು ಕಲ್ಲು ತೂರಾಟದಲ್ಲಿ ಭಾಗಿಯಾಗಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.




