ಉತ್ತರ ಪ್ರದೇಶ: ಅನಾರೋಗ್ಯದಿಂದ ನಿಧನರಾದ ಅತ್ತೆಯ ಅಂತ್ಯಕ್ರಿಯೆಗೆ ನದಿ ತೀರದಲ್ಲಿ ಚಿತೆ ಸಿದ್ಧಪಡಿಸುತ್ತಿದ್ದ ವೇಳೆ, ಅಳಿಯನನ್ನು ಮೊಸಳೆಯೊಂದು ನದಿಗೆ ಎಳೆದೊಯ್ದು ಜೀವಂತವಾಗಿ ನುಂಗಿರುವ ಅತ್ಯಂತ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಉಮ್ರಿ ಬೇಗಮ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ (ಮೇ 20) ಸಂಭವಿಸಿದೆ.ಮೃತ ದುರ್ದೈವಿಯನ್ನು ಗ್ರೇಟರ್ ನೋಯ್ಡಾದ ನಿವಾಸಿ ದೀಪಕ್ ಶರ್ಮಾ (30) ಎಂದು ಗುರುತಿಸಲಾಗಿದೆ. ಅತ್ತೆಯ ಚಿತೆ ಸಿದ್ಧಪಡಿಸುವಾಗಲೇ ಅಳಿಯನೂ ದುರ್ಮರಣಕ್ಕೀಡಾಗಿರುವುದು ಇಡೀ ಕುಟುಂಬವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ. ಉಮ್ರಿ ಗ್ರಾಮದ ನಿವಾಸಿ ಉರ್ಮಿಳಾ ದೇವಿ ಅವರ ನಿಧನದ ಕಾರಣ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೀಪಕ್ ಶರ್ಮಾ ಅವರು ತಮ್ಮ ಪತ್ನಿ ರೇಖಾ ಹಾಗೂ 4 ವರ್ಷದ ಹೆಣ್ಣು ಮಗಳೊಂದಿಗೆ ಆಗಮಿಸಿದ್ದರು. ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಸೋನೌಲಿ ಮೊಹಮ್ಮದ್ಪುರ ಉದಯಭಾನ್ ಪಾಹಿ ಗ್ರಾಮದ ಬಳಿಯ ಸರಯೂ ನದಿ ತೀರದಲ್ಲಿ ದೀಪಕ್ ಹಾಗೂ ಇತರ ಸಂಬಂಧಿಕರು ಚಿತೆಗಾಗಿ ಹೊಂಡ ತೋಡುವ ಕೆಲಸದಲ್ಲಿ ನಿರತರಾಗಿದ್ದರು.ಕೆಲಸ ಮುಗಿದ ನಂತರ ದೀಪಕ್ ಅವರು ಕೈ ತೊಳೆಯಲು ನದಿಯ ನೀರಿಗಿಳಿದಿದ್ದಾರೆ. ಈ ಭಾಗದಲ್ಲಿ ಮೊಸಳೆಗಳ ಅಪಾಯವಿರುವ ಬಗ್ಗೆ ಸ್ಥಳೀಯರು ಪದೇ ಪದೇ ಎಚ್ಚರಿಕೆ ನೀಡಿದ್ದರೂ, ದೀಪಕ್ ನದಿಯ ಹತ್ತಿರ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನದಿಯಲ್ಲಿದ್ದ ದೈತ್ಯ ಮೊಸಳೆಯೊಂದು ಏಕಾಏಕಿ ಜಿಗಿದು ದೀಪಕ್ ಅವರ ತಲೆಯನ್ನು ತನ್ನ ಬಾಯಿಗೆ ಕಚ್ಚಿ ಹಿಡಿದು ಕ್ಷಣಾರ್ಧದಲ್ಲಿ ಆಳವಾದ ನೀರಿನೊಳಗೆ ಎಳೆದೊಯ್ದಿದೆ. ತೀರದಲ್ಲಿದ್ದ ಸಂಬಂಧಿಕರು ರಕ್ಷಿಸಲು ಓಡಿಹೋಗಿ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.ಘಟನೆ ನಡೆದ ತಕ್ಷಣ ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುದೀರ್ಘ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ನದಿಯಲ್ಲಿ ಸತತ 24 ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿದ ತಂಡಕ್ಕೆ, ಇಂದು ಅಂದರೆ ಗುರುವಾರ (ಮೇ 21) ಮಧ್ಯಾಹ್ನದ ವೇಳೆಗೆ ಘಟನಾ ಸ್ಥಳದಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿ ದೀಪಕ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ನದಿಯಿಂದ ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಶವಪರೀಕ್ಷೆಗಾಗಿ ರವಾನಿಸಲಾಗಿದೆ.




