ಉಡುಪಿ: ವಿದೇಶದಲ್ಲಿ ಆಕರ್ಷಕ ಕೆಲಸ ಕೊಡಿಸುವುದಾಗಿ ನಂಬಿಸಿ ನಿಟ್ಟೂರು ನಿವಾಸಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಹಾಗೂ ಪಾಸ್ಪೋರ್ಟ್ ಪಡೆದು ವಂಚಿಸಿರುವ ಜಾಲದ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನ್ಯಾಯಾಲಯದ ಖಾಸಗಿ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಿಟ್ಟೂರು ನಿವಾಸಿ ಎನ್. ಆರ್. ಪದ್ಮನಾಭ ಉಪಾಧ್ಯ ವಂಚನೆಗೊಳಗಾದ ಪಿರ್ಯಾದಿದಾರರು. ಇವರಿಂದ ಹಣ ಪಡೆದು ವಂಚಿಸಿದ ಆರೋಪಿಗಳಾದ ಆಶ್ಲೆ ಕರ್ನೇಲಿಯೋ, ಸವಿತಾ, ಪ್ರಕೃತಿ ಮತ್ತು ಪ್ರಶಾಂತ್ ಎಂಬ ನಾಲ್ವರ ವಿರುದ್ಧ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.ಉದ್ಯೋಗ ಹುಡುಕುತ್ತಿದ್ದ ಪದ್ಮನಾಭ ಉಪಾಧ್ಯ ಅವರನ್ನು 2025ರ ಫೆಬ್ರವರಿ 12ರಂದು ಸಂಪರ್ಕಿಸಿದ್ದ 1ನೇ ಆರೋಪಿ ಆಶ್ಲೆ ಕರ್ನೇಲಿಯೋ, ಯುನೈಟೆಡ್ ಕಿಂಗ್ಡಮ್ (UK) ದೇಶದಲ್ಲಿ ‘ಹೌಸ್ ಕೀಪಿಂಗ್ ಸೂಪರ್ವೈಸರ್’ ಉದ್ಯೋಗವಿದ್ದು, ತಾನು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು. ಬಳಿಕ ತನ್ನ ಸಹಾಯಕಿ, 2ನೇ ಆರೋಪಿ ಸವಿತಾಳ ಮೊಬೈಲ್ ಸಂಖ್ಯೆಯನ್ನು ನೀಡಿದ್ದನು. ಪಿರ್ಯಾದಿದಾರರು ಸವಿತಾಳನ್ನು ಸಂಪರ್ಕಿಸಿದಾಗ, ಯು.ಕೆ. ವೀಸಾ ಪ್ರಕ್ರಿಯೆಗಾಗಿ ₹2,00,000 ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ತಿಳಿಸಿದ್ದಾಳೆ. ಅದರಂತೆ ಪದ್ಮನಾಭ ಅವರು 2025ರ ಮಾರ್ಚ್ 19ರಂದು ಸವಿತಾಳ ಬ್ಯಾಂಕ್ ಆಫ್ ಬರೋಡಾ ಖಾತೆಗೆ ₹2 ಲಕ್ಷ ಜಮಾ ಮಾಡಿದ್ದರು.ಬಳಿಕ ಈ ಜಾಲದ ಇತರ ಆರೋಪಿಗಳಾದ 3ನೇ ಆರೋಪಿ ಪ್ರಕೃತಿ ಮತ್ತು 4ನೇ ಆರೋಪಿ ಪ್ರಶಾಂತ್ ಎಂಬುವವರು ಸೇರಿಕೊಂಡು ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಪದ್ಮನಾಭ ಅವರಿಂದ ಹಂತ ಹಂತವಾಗಿ ಒಟ್ಟು ₹6,23,000 ನಗದು ಹಾಗೂ ಅಸಲಿ ಪಾಸ್ಪೋರ್ಟ್ ಅನ್ನು ಪಡೆದುಕೊಂಡಿದ್ದಾರೆ.ಹಣ ಪಡೆದ ಕೆಲ ದಿನಗಳ ಬಳಿಕ ಆರೋಪಿಗಳು, “ನಿಮ್ಮ ವೀಸಾ ತಿರಸ್ಕೃತವಾಗಿದೆ (Reject)” ಎಂದು ಸುಳ್ಳು ಹೇಳಿದ್ದಾರೆ. ಅಲ್ಲದೆ ಪಡೆದಿದ್ದ ಲಕ್ಷಾಂತರ ಹಣ ಹಾಗೂ ಪಾಸ್ಪೋರ್ಟ್ ಅನ್ನು ವಾಪಸ್ ನೀಡುವುದಾಗಿ ನಂಬಿಸಿದ್ದಾರೆ. ಆದರೆ ಆ ನಂತರ ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು, ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ತಾವು ಮೋಸ ಹೋಗಿರುವುದನ್ನು ಅರಿತ ಪದ್ಮನಾಭ ಉಪಾಧ್ಯ ಅವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2026 ರಂತೆ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 316(2) (ವಿಶ್ವಾಸದ್ರೋಹ) ಮತ್ತು 318 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.




