ಬಾಗಲಕೋಟೆ: ಧಾರಾಕಾರ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬೀಳುವ ಕೆಲವೇ ಕ್ಷಣಗಳ ಮೊದಲು ಸಾಕು ಬೆಕ್ಕಿನ ಕಾರಣದಿಂದ ತಂದೆ ಮತ್ತು ಮಗ ಪ್ರಾಣಾಪಾಯದಿಂದ ಪಾರಾದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ಸಾಕು ಪ್ರಾಣಿಯೇ ಕುಟುಂಬದ ಜೀವ ರಕ್ಷಕನಾದಂತಾಗಿದೆ.ಬಾಗಲಕೋಟೆಯ ವಲ್ಲಭಬಾಯಿ ನಗರ ನಿವಾಸಿಗಳಾದ ಶಬ್ಬೀರ್ ಬಾಗವಾನ್ ಹಾಗೂ ಅವರ ಪುತ್ರ ಆರ್ಬಾಜ್ ಬಾಗವಾನ್ ಮನೆಯಲ್ಲಿ ಇದ್ದ ವೇಳೆ ಭಾರೀ ಮಳೆಯಿಂದ ಮನೆಯ ಮೇಲ್ಛಾವಣಿಯಿಂದ ಮಣ್ಣಿನ ತುಂಡುಗಳು ಉದುರಲು ಆರಂಭವಾಗಿತ್ತು. ಇದೇ ವೇಳೆ ಮನೆಯಲ್ಲಿದ್ದ ಸಾಕು ಬೆಕ್ಕು ಭಯಗೊಂಡು ಹೊರಗೆ ಓಡಿದೆ. ಬೆಕ್ಕು ಹೊರಗೆ ಓಡಿದುದನ್ನು ಗಮನಿಸಿದ ಶಬ್ಬೀರ್, ಅದನ್ನು ಹಿಡಿಯಲು ಮನೆಯ ಹೊರಭಾಗಕ್ಕೆ ತೆರಳಿದ್ದಾರೆ. ತಂದೆಯ ಹಿಂದೆ ಪುತ್ರ ಆರ್ಬಾಜ್ ಕೂಡ ಹೊರಗೆ ಬಂದಿದ್ದಾರೆ. ಇಬ್ಬರೂ ಮನೆಯ ಬಾಗಿಲು ದಾಟಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಮನೆಯ ಸಂಪೂರ್ಣ ಮೇಲ್ಛಾವಣಿ ಕುಸಿದು ಬಿದ್ದಿದೆ.ಘಟನೆಯ ಬಗ್ಗೆ ಮಾತನಾಡಿದ ಆರ್ಬಾಜ್ ಬಾಗವಾನ್, “ಮನೆಯ ಮೇಲ್ಛಾವಣಿಯಿಂದ ಮಣ್ಣು ಬೀಳುತ್ತಿದ್ದಂತೆ ನಮ್ಮ ಬೆಕ್ಕು ಹೊರಗೆ ಓಡಿತು. ಅದಕ್ಕೆ ಆಹಾರ ನೀಡಲು ತಂದೆ ಅದರ ಹಿಂದೆ ಹೋದರು. ನಾನು ಕೂಡ ಅವರೊಂದಿಗೆ ಹೊರಬಂದೆ. ನಾವು ಹೊರಗೆ ಬಂದ ತಕ್ಷಣವೇ ಮೇಲ್ಛಾವಣಿ ಕುಸಿದು ಬಿತ್ತು. ಬೆಕ್ಕು ಹೊರಗೆ ಓಡದೇ ಇದ್ದಿದ್ದರೆ ಇಂದು ನಾವು ಬದುಕಿರುತ್ತಿರಲಿಲ್ಲ” ಎಂದು ಹೇಳಿದರು.ಅದೃಷ್ಟವಶಾತ್ ಕುಟುಂಬದ ಇತರ ಸದಸ್ಯರು ಮದುವೆ ಕಾರ್ಯಕ್ರಮದ ನಿಮಿತ್ತ ವಿಜಯಪುರಕ್ಕೆ ತೆರಳಿದ್ದರಿಂದ ಮನೆಯಲ್ಲಿ ತಂದೆ-ಮಗ ಮಾತ್ರ ಇದ್ದರು. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪ್ರಾಣಾಪಾಯದಿಂದ ಪಾರಾದರೂ ಮಳೆಯ ದುರಂತದಿಂದ ಕುಟುಂಬಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ಪಾತ್ರೆಗಳು, ದವಸ-ಧಾನ್ಯಗಳು ಹಾಗೂ ವ್ಯಾಪಾರಕ್ಕಾಗಿ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ಹಾನಿಗೊಳಗಾಗಿವೆ.ಸದ್ಯ ಸಂಕಷ್ಟದಲ್ಲಿರುವ ಶಬ್ಬೀರ್ ಬಾಗವಾನ್ ಅವರು ಜಿಲ್ಲಾಡಳಿತ ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಒಂದು ಕಡೆ ಮಳೆಯ ಅವಾಂತರ, ಮತ್ತೊಂದು ಕಡೆ ಸಾಕು ಪ್ರಾಣಿಯ ಸಮಯಪ್ರಜ್ಞೆಯಿಂದ ಇಬ್ಬರ ಜೀವ ಉಳಿದಿರುವ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಬೆಕ್ಕಿನ ನಡೆ ಭಾರೀ ಅನಾಹುತವೊಂದನ್ನು ತಪ್ಪಿಸಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.




