ಹೆಬ್ರಿ: ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಹೆಬ್ರಿ ತಾಲೂಕಿನ ಹೊಸೂರು ಎಂಬಲ್ಲಿ ವ್ಯವಸ್ಥಿತವಾಗಿ ನೆರವೇರುತ್ತಿದ್ದ ಬೃಹತ್ ಇಸ್ಪೀಟ್ ಜೂಜಾಟದ (ಜುಗಾರಿ) ಅಡ್ಡೆಯ ಮೇಲೆ ಪೊಲೀಸರು ಶನಿವಾರ ರಾತ್ರಿ ಭರ್ಜರಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ಇಸ್ಪೀಟ್ ದಂಧೆಯ ಕಿಂಗ್ಪಿನ್ಗಳು ಸೇರಿದಂತೆ 15ಕ್ಕೂ ಹೆಚ್ಚು ಆರೋಪಿಗಳು ಕತ್ತಲೆಯ ಲಾಭ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಜೂಜಿನ ಅಡ್ಡೆಯಿಂದ ಕಾರು, ಬೈಕ್ ಹಾಗೂ ನಗದು ಸೇರಿದಂತೆ ಒಟ್ಟು ₹13,07,370 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ವಿಜೇಶ್, ದಸ್ತಗೀರ್ ಮತ್ತು ರೋಹಿತ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ದಾಳಿ ವೇಳೆ ಸ್ಥಳದಿಂದ ಓಡಿಹೋದ ಮಂಗಳೂರಿನ ನಿತಿನ್, ಪಡು, ಪಂಪ್ವೆಲ್ನ ಕಿಶೋರ್, ಮೂಲ್ಕಿಯ ಸಿದ್ದು ಶೆಟ್ಟಿ, ರಂಗನಾಥ್, ರಫೀಕ್, ಇಮ್ರಾನ್, ಬೆಳ್ತಂಗಡಿಯ ನಜೀರ್, ಬರ್ಕೆಯ ಚೇತನ್, ಪಾಂಗಾಳದ ಕಿಶೋರ್, ಕಾರ್ಕಳದ ವಿಜಯ ಶೆಟ್ಟಿ, ಜಾರ್ಕಳದ ಮಹೇಶ್, ಭಟ್ಕಳದ ಮಹಾದೇವ ನಾಯ್ಕ ಹಾಗೂ ಕಾರಿನ ಚಾಲಕ ಸೇರಿದಂತೆ ಇತರ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಹೆಬ್ರಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಿಗೆ (DYSP) ಸಿಕ್ಕ ಖಚಿತ ಮಾಹಿತಿ ಮೇರೆಗೆ, ಕಾರ್ಕಳ ವೃತ್ತ ನಿರೀಕ್ಷಕರ (CPI) ಆದೇಶದಂತೆ ಹೆಬ್ರಿ ಪೊಲೀಸರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಶನಿವಾರ ರಾತ್ರಿ 10.45ರ ಸುಮಾರಿಗೆ ಹೊಸೂರಿನ ಜೂಜು ಅಡ್ಡೆಗೆ ಮುತ್ತಿಗೆ ಹಾಕಿದರು. ಆರೋಪಿಗಳು ಹೊಸೂರಿನ ನಿರ್ಜನ ಪ್ರದೇಶದಲ್ಲಿ ಚಪ್ಪರ ಹಾಕಿ, ಮೇಲ್ಗಡೆ ಟರ್ಪಾಲ್ ಹಾಸಿ, ವಿದ್ಯುತ್ ಬಲ್ಬ್ ಹಾಗೂ ಬ್ಯಾಟರಿ ವ್ಯವಸ್ಥೆ ಮಾಡಿಕೊಂಡು ಹೈಟೆಕ್ ನೆಟ್ವರ್ಕ್ ನಿರ್ಮಿಸಿದ್ದರು. ಟೇಬಲ್ ಮೇಲೆ ಬಟ್ಟೆ ಹಾಸಿ ಸುತ್ತಲೂ ಕುಳಿತು ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಎಲೆಗಳಿಂದ ‘ಅಂದರ್-ಬಾಹರ್’ ಜೂಜಾಟ ಆಡುತ್ತಿರುವುದು ದಾಳಿಯ ವೇಳೆ ಪತ್ತೆಯಾಗಿದೆ.ಪೊಲೀಸರು ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ ₹23,970 ನಗದು ಹಣ, ಆರೋಪಿಗಳ ಬಳಿಯಿದ್ದ ₹35,000 ಮೌಲ್ಯದ 4 ಮೊಬೈಲ್ ಫೋನ್ಗಳು, ಇಸ್ಪೀಟ್ ಕಾರ್ಡ್ಗಳು, ಟೇಬಲ್, ಕುರ್ಚಿ ಹಾಗೂ ಬ್ಯಾಟರಿ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಜೂಜುಕೋರರು ಅಡ್ಡೆಗೆ ಬರಲು ಬಳಸಿದ್ದ ₹5 ಲಕ್ಷ ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರು , ₹4.50 ಲಕ್ಷ ಮೌಲ್ಯದ ನೀಲಿ ಬಣ್ಣದ ಸ್ವಿಫ್ಟ್ ಕಾರು , ₹1.50 ಲಕ್ಷ ಮೌಲ್ಯದ ಆಲ್ಟೋ ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು (ಹೊಂಡಾ ಸಿಡಿ 100, ಹೀರೊ ಪ್ಯಾಶನ್, ಸ್ಕೂಟಿ) ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಸ್ವತ್ತುಗಳ ಮೌಲ್ಯ ₹13,07,370 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 27/2026, ಕರ್ನಾಟಕ ಜೂಜಾಟ ಕಾಯ್ದೆ (KP Act) ಕಲಂ 80 ಹಾಗೂ ಬಿಎನ್ಎಸ್ (BNS) ಕಲಂ 112 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.




