ಕಣ್ಣೂರು: ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಶಾಖ ಮಹೋತ್ಸವದ ವೇಳೆ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ಹಾಗೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕನ್ನಡಿಗರನ್ನು ಗುರಿಯಾಗಿಸಿಕೊಂಡು ದರ್ಪ ತೋರಲಾಗುತ್ತಿದ್ದು, ಸದ್ಯ ಭಕ್ತರ ಆಕ್ರೋಶದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.“ದೇವರ ದರ್ಶನಕ್ಕಾಗಿ ನಾವು 8 ರಿಂದ 10 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಇಲ್ಲಿ ₹1,000 ಮುಖಬೆಲೆಯ ವಿಐಪಿ ಟಿಕೆಟ್ ಹೆಸರಿನಲ್ಲಿ ದೊಡ್ಡ ಹಗರಣ (ಸ್ಕ್ಯಾಮ್) ನಡೆಯುತ್ತಿದೆ. ಇಷ್ಟು ದೊಡ್ಡ ಮೊತ್ತದ ಟಿಕೆಟ್ ಪಡೆದರೂ ಸರಿಯಾಗಿ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಬದಲಿಗೆ ಆಡಳಿತ ಮಂಡಳಿಯವರು ರೌಡಿಸಂ ಮಾಡುತ್ತಿದ್ದಾರೆ, ಭಕ್ತರನ್ನು ಹೊಡೆಯಲು ಬರುತ್ತಾರೆ” ಎಂದು ನೊಂದ ಕರ್ನಾಟಕದ ಭಕ್ತರು ಗಂಭೀರವಾಗಿ ಆರೋಪಿಸಿದ್ದಾರೆ.ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಮಿತಿ ಮೀರಿದ್ದು, ಸುಮಾರು 5 ರಿಂದ 6 ಕಿಲೋಮೀಟರ್ ಉದ್ದದವರೆಗೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಗಂಟೆಗಟ್ಟಲೆ ನಿಂತು ನೂರಾರು ಭಕ್ತರು ತೀವ್ರವಾಗಿ ಸುಸ್ತಾಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವು ಭಕ್ತರು ದರ್ಶನ ಸಿಗದೇ ಮಧ್ಯದಲ್ಲೇ ವಾಪಸ್ ಆಗಿದ್ದಾರೆ. ಕಾಲ್ತುಳಿತ ಸಂಭವಿಸುವ ಭೀತಿಯೂ ಎದುರಾಗಿದೆ. ಇದರ ನಡುವೆ, ಭದ್ರತಾ ಸಿಬ್ಬಂದಿ ಮಹಿಳಾ ಭಕ್ತರನ್ನು ಮನಸೋಇಚ್ಛೆ ತಳ್ಳುತ್ತಿರುವುದು ಹಾಗೂ ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಬಹಿರಂಗವಾಗಿದೆ.ಕರ್ನಾಟಕದಿಂದ ಸಾವಿರಾರು ಭಕ್ತರು ಕೊಟ್ಟಿಯೂರಿಗೆ ಶಿವನ ದರ್ಶನಕ್ಕೆ ಬರುತ್ತಿದ್ದಾರೆ. ಆದರೆ ಕನ್ನಡಿಗರಿಗೆ ಇಲ್ಲಿ ಕನಿಷ್ಠ ಗೌರವವೂ ಸಿಗುತ್ತಿಲ್ಲ, ಅನಗತ್ಯವಾಗಿ ಕಠಿಣವಾಗಿ ವರ್ತಿಸಲಾಗುತ್ತಿದೆ. ಆದ್ದರಿಂದ ರಾಜ್ಯದ ಭಕ್ತರು ಯಾರೂ ಸದ್ಯಕ್ಕೆ ಕೊಟ್ಟಿಯೂರಿಗೆ ಹೋಗಬೇಡಿ” ಎಂದು ಕನ್ನಡಿಗರು ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿರಂತರ ತಳ್ಳಾಟ-ನೂಕಾಟ ನಡೆಯುತ್ತಿದ್ದರೂ ದೇವಸ್ಥಾನದ ಮಂಡಳಿ ಸೂಕ್ತ ಭದ್ರತೆ ಮತ್ತು ವ್ಯವಸ್ಥೆ ಕಲ್ಪಿಸದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.




