ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಜಮಲಾಬಾದ್ ಕೋಟೆ ಗಡಾಯಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧ ಹೇರಿದೆ. ಮಳೆಯ ಕಾರಣ ಕಲ್ಲುಗಳು ಜಾರುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಜೂನ್ 14ರಿಂದ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಕುರಿತು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗ ಪ್ರಕಟಣೆ ಹೊರಡಿಸಿದ್ದು, ಸುರಕ್ಷತಾ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದೆ.ಈ ಹಿಂದೆ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಹಾಗೂ ಇತರ ಅನಾಹುತಗಳನ್ನು ತಡೆಗಟ್ಟುವ ಉದ್ದೇಶದಿಂದ ಗಡಾಯಿಕಲ್ಲಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ಹುಲಿ ಗಣತಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಹ ಪ್ರವೇಶ ನಿಷೇಧ ಜಾರಿಯಲ್ಲಿತ್ತು. ಬಳಿಕ ಜೂನ್ 1ರಿಂದ ಗಡಾಯಿಕಲ್ಲು ಪ್ರವಾಸಿಗರ ವೀಕ್ಷಣೆಗೆ ಮತ್ತೆ ತೆರೆಯಲಾಗಿತ್ತು. ಪುನರಾರಂಭಗೊಂಡ ಮೊದಲ ವಾರಾಂತ್ಯದಲ್ಲೇ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಜೂನ್ 7ರಂದು ಮಾತ್ರವೇ ಸಾವಿರಕ್ಕೂ ಹೆಚ್ಚು ಮಂದಿ ಗಡಾಯಿಕಲ್ಲಿಗೆ ಭೇಟಿ ನೀಡಿ ಹೊಸ ದಾಖಲೆ ನಿರ್ಮಿಸಿದ್ದರು.ಆದರೆ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಚಾರಣ ಮಾರ್ಗದಲ್ಲಿನ ಕಲ್ಲುಗಳು ಜಾರುವ ಸಾಧ್ಯತೆ ಹೆಚ್ಚಾಗಿದ್ದು, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಮತ್ತೆ ಪ್ರವೇಶ ನಿರ್ಬಂಧಿಸಿದೆ. ಕೇವಲ 13 ದಿನಗಳ ಅಂತರದಲ್ಲಿ ಗಡಾಯಿಕಲ್ಲು ಮತ್ತೊಮ್ಮೆ ಪ್ರವಾಸಿಗರಿಗೆ ಮುಚ್ಚಲ್ಪಟ್ಟಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಪ್ರವೇಶ ಪುನರಾರಂಭಿಸುವ ಕುರಿತು ಇಲಾಖೆ ನಿರ್ಧಾರ ಕೈಗೊಳ್ಳಲಿದೆ.




