ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭೀತಿ ಆವರಿಸಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಬರೋಬ್ಬರಿ 11 ಮಂದಿ ರೋಗಿಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ದಿಢೀರ್ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಆಸ್ಪತ್ರೆಯ ಮೂಲಗಳ ಪ್ರಕಾರ, ಮೃತಪಟ್ಟವರೆಲ್ಲರೂ ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ಕಳೆದ 24 ಗಂಟೆಗಳಲ್ಲಿ 11 ಮಂದಿ ಸಾವನ್ನಪ್ಪಿರುವುದು ಆಸ್ಪತ್ರೆಯ ಇತರ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ರೋಗಿಗಳ ಸರಣಿ ಸಾವಿನ ಬೆನ್ನಲ್ಲೇ ಮೃತರ ಸಂಬಂಧಿಕರು ಆಸ್ಪತ್ರೆ ಮಂಡಳಿ ಮತ್ತು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಕಣ್ಮುಂದೆಯೇ 5 ರಿಂದ 6 ಜನ ಸತ್ತಿದ್ದಾರೆ. ರಾತ್ರಿಯಿಂದ ಬೆಳಗ್ಗೆವರೆಗೂ ಸಾವುಗಳು ಸಂಭವಿಸುತ್ತಿದ್ದರೂ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಎಮರ್ಜೆನ್ಸಿ ಟೈಮ್ನಲ್ಲಿ ವೈದ್ಯರೇ ಇರುವುದಿಲ್ಲ ಎಂದರೆ ಹೇಗೆ? ಎಂದು ರೋಗಿಯೊಬ್ಬರ ಸಂಬಂಧಿ ಪ್ರಶ್ನಿಸಿದ್ದಾರೆ.ಅಲ್ಲದೆ, ವೈದ್ಯರ ಫೋನ್ ನಂಬರ್ ಕೇಳಿದರೆ ಕೊಡುತ್ತಿಲ್ಲ. ಚಿಕಿತ್ಸೆಯಲ್ಲಿ ಏನಾಗುತ್ತಿದೆ ಎಂಬ ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ. ಈ ಸಾವುಗಳಿಗೆ ಹೊಣೆ ಯಾರು? ಎಂದು ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.ಸಾವನ್ನಪ್ಪಿದವರಲ್ಲಿ ಸೈಯ್ಯದ್ ಆರೀಫ್ ಪಾಷ (80), ಹರೀಶ್ ಬಿ.ಆರ್.(40), ಬಾಲಶಂಕರ್ (65), ಸಂಶುನ್ನೀಶ (70), ರಾಜು (54), ನಿಂಗೇಗೌಡ (70), ಮಸೀನಾ ಬಾನು (58), ಗೋಪಾಲರಾಜು (55), ಬೈರೋಜಿ ರಾವ್ (80), ಸುಹಾಲ್ ಖಾನ್ (43) ಮತ್ತು ನೀಲಿ (79) ಎಂಬುವವರ ಗುರುತು ಪತ್ತೆಯಾಗಿದೆ. ಸದ್ಯ 11 ಮಂದಿ ಸಾವಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳು ಭಯಭೀತರಾಗಿದ್ದಾರೆ. ಆಸ್ಪತ್ರೆ ಮಂಡಳಿಯು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




