ಮಂಗಳೂರು: ಮದುವೆಗೆ ಹೋಗಿ ಹಿಂದಿರುಗುತ್ತಿದ್ದ ಕೇರಳ ಮೂಲಕ ಉದ್ಯಮಿಯೊಬ್ಬರ ಕಾರಿಗೆ ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದೋಚಿದ ಘಟನೆ ಬೆಳಗ್ಗಿನ ಜಾವ ಬೈಕಂಪಾಡಿ ದ್ವಾರ ಹೊಟೆಲ್ ಬಳಿ ನಡೆದಿದೆ.
ಕೇರಳದ ಪಯ್ಯನ್ನೂರು ನಿವಾಸಿ ವಿಕಾಸ್ ತನ್ನ ಪತ್ನಿ ಮತ್ತು ಮಗನೊಂದಿಗೆ ಮುಂಬೈಯ ತನ್ನ ಸ್ನೇಹಿತರೊಬ್ಬರ ಮದುವೆ ಹೋಗಿ ಹಿಂದಿರುಗುತ್ತಿದ್ದರು.
ಬೆಳಗ್ಗಿನ ಜಾವ 2:30 ಸುಮಾರಿಗೆ ಉದ್ಯಮಿಯ ಕಾರು ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ದ್ವಾರ ಹೋಟೆಲ್ ಬಳಿ ತಲುಪುತ್ತಿದ್ದಂತೆ ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ಸುಮಾರು 7-8 ಮಂದಿ ದರೋಡೆಕೋರರು ವಿಕಾಸ್ ಅವರನ್ನು ಕಾರಿನಿಂದ ಇಳಿಸಿ ಪತ್ನಿ ಮತ್ತು ಮಗು ಸಹಿತ ಕಾರನ್ನು ಅಪಹರಿಸಿದ್ದರು.
ಬಳಿಕ ಪಣಂಬೂರು ಬೀಚ್ ರಸ್ತೆ ಬಳಿ ಉದ್ಯಮಿ ವಿಕಾಸ್ ಅವರ ಪತ್ನಿ ಮತ್ತು ಮಗನ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಹಾಗೂ ಕಾರನ್ನು ದೋಚಿ ಸಂತ್ರಸ್ತರನ್ನು ರಸ್ತೆಯಲ್ಲೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸಂಬಂಧ ಉದ್ಯಮಿ ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.




