ಶಿಕ್ಷಕಿಯರ ಕಿರುಕುಳಕ್ಕೆ ಮನನೊಂದು ಎಂಟನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಂಬಂಧ ಶಾಲೆಯ ಅಡುಗೆ ಸಹಾಯಕಿ ಹಾಗೂ ಮೂವರು ಶಿಕ್ಷಕಿಯರ ವಿರುದ್ಧ ಇದೀಗ ಎಫ್ಐಆರ್ (FIR) ದಾಖಲಾಗಿದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಈರಪ್ಪ, ಸಹ ಶಿಕ್ಷಕಿಯರಾದ ಕವಿತಾ, ರೂಪಾ ಮತ್ತು ಅಡುಗೆ ಸಹಾಯಕಿ ಕಮಲಮ್ಮ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರೆಲ್ಲರೂ ಸೇರಿ ಮೃತ ವಿದ್ಯಾರ್ಥಿನಿ ಮಧುಶ್ರೀಗೆ ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ವಿದ್ಯಾರ್ಥಿನಿ ಮಧುಶ್ರೀ, ಶಾಲೆಯ ಇತರ ಕೆಲವು ವಿದ್ಯಾರ್ಥಿಗಳು ತನಗೆ ನೀಡುತ್ತಿದ್ದ ಮಾನಸಿಕ ಕಿರುಕುಳದ ಬಗ್ಗೆ ವಿವರವಾದ ಪತ್ರವೊಂದನ್ನು ಬರೆದಿದ್ದಳು. ಈ ಪತ್ರವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ (PDO) ನೀಡಿ ನ್ಯಾಯ ಕೇಳಲು ನಿರ್ಧರಿಸಿದ್ದ ಆಕೆ, ಅದನ್ನು ತನ್ನ ಶಾಲಾ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದಳು. ಆದರೆ, ಈ ವಿಷಯ ಶಾಲೆಯ ಶಿಕ್ಷಕಿಯರ ಗಮನಕ್ಕೆ ಬಂದ ತಕ್ಷಣ, ಅವರು ವಿದ್ಯಾರ್ಥಿನಿಗೆ ಬೆಂಬಲವಾಗಿ ನಿಲ್ಲುವ ಬದಲು ಆಕೆಯನ್ನೇ ಮತ್ತಷ್ಟು ಗುರಿಯಾಗಿಸಿಕೊಂಡು (Target) ಮಾನಸಿಕವಾಗಿ ಹಿಂಸಿಸಲು ಆರಂಭಿಸಿದ್ದರು ಎಂದು ಹೇಳಲಾಗಿದೆ.
ತನ್ನ ಮೇಲಾಗುತ್ತಿದ್ದ ನಿರಂತರ ಕಿರುಕುಳದಿಂದ ನೊಂದಿದ್ದ ಮಧುಶ್ರೀ, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಶಾಲೆಯ ದೈಹಿಕ ಶಿಕ್ಷಕ ಶ್ರೀನಿವಾಸ್ ಅವರ ಬಳಿ ಹೋಗಿ ತನ್ನ ಅಳಲನ್ನು ತೋಡಿಕೊಂಡಿದ್ದಳು ಎನ್ನಲಾಗಿದೆ. ಆದರೂ ಆಕೆಗೆ ಶಾಲಾ ಸಿಬ್ಬಂದಿಯಿಂದ ಸೂಕ್ತ ರಕ್ಷಣೆ ಅಥವಾ ಸಾಂತ್ವನ ಸಿಗದ ಕಾರಣ, ತೀವ್ರ ಮನನೊಂದು ಕೊನೆಯದಾಗಿ ಈ ಘೋರ ನಿರ್ಧಾರ ಕೈಗೊಂಡಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.




