ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭಾರತೀಯ ಖೋಟಾ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿ, 7 ಆರೋಪಿಗಳನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ವೇಳೆ ಇಬ್ರಾಹಿಂ (60), ಶರೀಪ್(51), ಸಂದೀಪ ಪುಂಡಲಿಕ ಶೋಳಂಬಿ(30), ಮಹಮ್ಮದ್ ನಬಾಸ್(37), ಸಲ್ಮಾನ್ ಫಾರೀಸ್(25), ಸಿರಾಜುದ್ದೀನ್(34) ಹಾಗೂ ಇರ್ಷಾದ್(31) ಅವರನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ ₹500 ಮುಖಬೆಲೆಯ ಒಂದು ನೋಟು, ₹500 ನೋಟಿನ ಮಾದರಿಯಂತೆ ಮುದ್ರಿಸಲಾದ A-4 ಗಾತ್ರದ 21 ಹಾಳೆಗಳು, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ಸೀಲ್ಗಳು ಸೇರಿದಂತೆ ಖೋಟಾ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 178ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿಂದು ಮಣಿ ಆರ್ ಎನ್, ಐ.ಪಿ.ಎಸ್ ರವರು ಹಾಗೂ ಕೊಡಗು ಜಿಲ್ಲಾ ಸಿಬ್ಬಂದಿಗಳಾದ ಯೊಗೀಶ್ ಬಿ, HC 193 ಮತ್ತು ನಿರಂಜನ್ ಎಂ ಎನ್, HC 190 ರವರುಗಳು, ದ.ಕ ಜಿಲ್ಲಾ ವಿಶೇ಼ಷ ಘಟಕದ ಪೊಲೀಸ್ ನಿರೀಕ್ಷಕರಾದ ನಂದಕುಮಾರ್ ರವರು ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ದೀಪಕ್, ಹೆಚ್.ಸಿ ಸತೀಶ್ ಹಾಗೂ ಹೆಚ್.ಸಿ ರೌಫ್ ರವರುಗಳು ಸದ್ರಿ ಜಾಲವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಲ್ಲಿ ಉಪ್ಪಿನಂಗಡಿ ಪಿ.ಎಸ್.ಐ ರವರೊಂದಿಗೆ ಸಹಕರಿಸಿರುತ್ತಾರೆ ಎಂದು ತಿಳಿದು ಬಂದಿದೆ.




