ಉಡುಪಿ : ಮುದರಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ, ಉದ್ಯಮಿ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್ಔಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದಾನಿ ಯುಪಿಸಿಎಲ್ನ ಗುತ್ತಿಗೆ ಕೈತಪ್ಪಿದ ಕಾರಣಕ್ಕಾಗಿ ಗುತ್ತಿಗೆದಾರ ಕಿಶೋರ್ ಪೂಜಾರಿ, ತನ್ನ ಸಹೋದರ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಶೂಟ್ಔಟ್ ಪ್ರಕರಣದ ಬೆಳವಣಿಗೆಯ ಮಾಹಿತಿಗಳನ್ನು ನೀಡಿದರು.
ಉಚ್ಚಿಲ ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್ ನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದನು. ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್ ಕಂಪೆನಿಯ ಪೈಪ್ಲೈನ್ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿ ಯೋಜನೆಯ ಗುತ್ತಿಗೆಯನ್ನು ತನಗೆ ನೀಡುವಂತೆ ಕಿಶೋರ್ ಪೂಜಾರಿ ಕೇಳಿ ಕೊಂಡಿದ್ದನು. ಅದಕ್ಕೆ ಕಂಪೆನಿಯವರು ಕೂಡ ಒಪ್ಪದೆ ಡೇವಿಡ್ ಡಿಸೋಜಗೆ ನೀಡಿದ್ದರು. ಈ ಕೋಟ್ಯಂತರ ರೂ. ಮೊತ್ತದ ಯೋಜನೆ ಕೈತಪ್ಪಿ ಹೋದ ಸಿಟ್ಟಿನಲ್ಲಿ ಕಿಶೋರ್ ಪೂಜಾರಿ, ಡೇವಿಡ್ ಡಿಸೋಜರನ್ನು ಕೊಲೆ ಮಾಡುವ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ.
ಅಗಸ್ಟ್ 7ರಂದು ನಡೆದ ಕೃತ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿ ಗಳಾದ ರಾಜು, ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ಶೇಖ್ರನ್ನು ಬಂಧಿಸಿ, ಅನ್ಮೋಲ್ ಮತ್ತು ಜಿಯಾಹುಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ತನಿಖೆಯಿಂದ ಗುತ್ತಿಗೆಗೆ ಸಂಬಂಧಿಸಿ ಕೋಟ್ಯಂತರ ಹಣಕಾಸಿನ ವಿಚಾರವಾಗಿ ಇವರಿಬ್ಬರಿಗೆ ಡೀಲ್ ನೀಡಿರುವ ವಿಚಾರ ಬೆಳಕಿಗೆ ಬಂತು
ಅಲ್ಲದೆ ಬಂಧಿತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಇವರ ಖಾತೆಗೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಹಾಗೂ ಸದಾನಂದ ದೇವಾಡಿಗ ಹಣ ಜಮಾ ಮಾಡಿ ಕೃತ್ಯಕ್ಕೆ ಸಹಕರಿಸಿರುವುದು ಕಂಡುಬಂತು. ಅದರಂತೆ ಅವರನ್ನು ಬಂಧಿಸಿ, ತನಿಖೆ ಮುಂದುವರೆಸಿದಾಗ ಇವರೆಲ್ಲರಿಗೂ ಹಣಕಾಸಿನ ವ್ಯವಸ್ಥೆ ಮಾಡಿರುವುದು ಹಾಗೂ ಕೃತ್ಯಕ್ಕೆ ಸೂಪಾರಿ ನೀಡಿರುವುದು ಎರ್ಮಾಳಿನ ಗುತ್ತಿಗೆದಾರ ಕಿಶೋರ್ ಪೂಜಾರಿ ಎಂಬುದು ಪತ್ತೆಯಾಯಿತು ಎಂದು ಅವರು ತಿಳಿಸಿದರು.
ಉತ್ತರ ಭಾರತದ ರಾಜ್ಯದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡ ಆರೋಪಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿರುವ ಬಿಹಾರದ ಸೂರಜ್ ಕುಮಾರ್ ಎಂಬಾತನನ್ನು
ಉತ್ತರಖಾಂಡ್ನಲ್ಲಿ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿತು. ಆಗ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಮೂವರು ಶೂಟರ್ಗಳನ್ನು ವ್ಯವಸ್ಥೆ ಮಾಡಿರುವ ಅನೂಜ್ ಬಗ್ಗೆ ಮಾಹಿತಿ ದೊರೆತಿದೆ.




