ಯುಎಇಯಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಗಬಾನ್ ದೇಶದ ಹಡಗು ರತ್ನಗಿರಿ ಕರಾವಳಿಯ ಪಶ್ಚಿಮಕ್ಕೆ ಸುಮಾರು 41 ಮೈಲ್ ದೂರದಲ್ಲಿ ಅಪಾಯದಲ್ಲಿ ಸಿಲುಕಿದ್ದು ಅದರಲ್ಲಿದ್ದ 19 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ.
ರಕ್ಷಿಸಲ್ಪಟ್ಟವರಲ್ಲಿ 18 ಮಂದಿ ಭಾರತೀಯರು ಮತ್ತು ಓರ್ವ ಇಥಿಯೋಪಿಯನ್ ಪ್ರಜೆ ಸೇರಿದ್ದಾನೆ. ಯುಎಇಯ ಖೋರ್ ಫಕನ್ನಿಂದ 3,911 ಮೆಟ್ರಿಕ್ ಟನ್ ಅಸಾಲ್ಟ್ ಬಿಟುಮಿನ್ ಹೊತ್ತು ಮಂಗಳೂರು ಕಡೆಗೆ ಬರುತ್ತಿದ್ದ ಹಡಗು ಬೆಳಗ್ಗೆ 9.23ರ ವೇಳೆಗೆ ಅಪಾಯಕ್ಕೆ ಸಿಲುಕಿತ್ತು.
ಈ ಬಗ್ಗೆ ಕರೆ ಸ್ವೀಕರಿಸಿದ ಮುಂಬೈ ಕೋಸ್ಟ್ ಗಾರ್ಡ್ ಕೂಡಲೇ ಸುಜೀತ್ ಮತ್ತು ಅಪೂರ್ವ ಎಂಬ ಎರಡು ಹಡಗುಗಳು ಹಾಗೂ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿದೆ. ಹಡಗು ಮುಳುಗುವ ಹಂತದಲ್ಲಿದೆ ಎಂದು ಕೋಸ್ಟ್ ಗ್ಗಾರ್ಡ್ ಮೂಲಗಳು ತಿಳಿಸಿವೆ.