ಮಂಗಳೂರು: ಮತ ಚಲಾವಣೆಗೆ ಮತಗಟ್ಟೆಗೆ ಬರುವ ಮತದಾರರು ಮೊಬೈಲ್ ಪೋನ್ ಅನ್ನು ತರುವಂತಿಲ್ಲ ಎಂದು ದ.ಕ.ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣಾ ಆಯೋಗದ ನಿಯಮದಂತೆ ಮತದಾರರು ಮತ ಚಲಾಯಿಸಲು ಬರುವಾಗ ಮೊಬೈಲ್ ಪೋನ್ ತರುವಂತಿಲ್ಲ. ಮೊಬೈಲ್ ನೊಂದಿಗೆ ಮತಗಟ್ಟೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ಮೊಬೈಲ್ ತಂದಲ್ಲಿ ಅದನ್ನು ಸೇಫ್ ಡೆಪಾಸಿಟ್ ಮಾಡಲು ವ್ಯವಸ್ಥೆ ಮಾಡಲಾಗುವುದು. ಆದರೆ ಮತ್ತೊಂದು ಸರತಿ ಸಾಲು ಆಗುವ ಬದಲು ಮತದಾರರು ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಬರುವುದು ಉತ್ತಮ ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಬಹಿಷ್ಕಾರವಿಲ್ಲ. ಕೆಲವೆಡೆ ಚುನಾವಣಾ ಬಹಿಷ್ಕಾರಕ್ಕೆ ಕರೆ ಕೊಡಲಾಗಿತ್ತು. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ರಸ್ತೆ ಮೊದಲಾದ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಅವರನ್ನು ಮನವೊಲಿಸಿ ಚುನಾವಣಾ ಬಹಿಷ್ಕಾರ ಕರೆಯನ್ನು ವಾಪಾಸು ಪಡೆಯಲಾಗಿದ್ದು, ಸದ್ಯ ಯಾವುದೇ ಚುನಾವಣಾ ಬಹಿಷ್ಕಾರ ಇಲ್ಲ ಎಂದು ತಿಳಿಸಿದರು.
Author: main-admin
ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಚೆನ್ನೈ : ಇಬ್ಬರು ಮಾಜಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 51 ವರ್ಷದ ಕಲಾಕ್ಷೇತ್ರ ಫೌಂಡೇಶನ್ ನ ಮಾಜಿ ಅಧ್ಯಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಶೀಜಿತ್ ಕೃಷ್ಣ ಎಂದು ಗುರುತಿಸಲಾಗಿದೆ. 1995-2007ರ ಅವಧಿಯಲ್ಲಿ ಕಲಾಕ್ಷೇತ್ರದ ವಿದ್ಯಾರ್ಥಿಗಳಾಗಿದ್ದಾಗ ಕೃಷ್ಣ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಇಬ್ಬರು ಮಹಿಳೆಯರ ದೂರಿನ ಮೇರೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ನೀಲಂಕರೈ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ನೇತೃತ್ವದ ತಂಡ ಆತನನ್ನು ಬಂಧಿಸಿದೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.
ಉಡುಪಿ : ಮಲ್ಪೆ ಬೀಚ್ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಬೀಚ್ ಪ್ರದೇಶದಲ್ಲಿ ಸೂಚಿಸಿರುವಂತಹ ಸುರಕ್ಷತಾ ಮಾಹಿತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮದ್ಯಪಾನ ಮಾಡಿ ನೀರಿಗೆ ಇಳಿಯುವುದು, ಕಡಲ ತೀರದ ಅನಧಿ ದೂರದಲ್ಲಿ ಈಜುವುದು ಹಾಗೂ ಅಪಾಯವಿರುವಂತಹ ಸ್ಥಳದಲ್ಲಿ ನೀರಿನ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಈ ಸೂಚನೆಗಳನ್ನು ಉಲ್ಲಂಘಿಸುವ ಪ್ರವಾಸಿಗರ ಮೇಲೆ ದಂಡ ವಿಧಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ವಿಟ್ಲ: ಬಾವಿಗೆ ರಿಂಗ್ ಹಾಕುವಾಗ ಆಮ್ಲಜನಕ ಸಿಗದೆ ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ (40 ವ) ಮತ್ತು ಮಲಾರ್ ನಿವಾಸಿ ಆಲಿ (24 ವ) ಎಂದು ಗುರುತಿಸಲಾಗಿದೆ. ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದರು. ಬಾವಿಗೆ ಇಳಿದವನು ಮೇಲಕ್ಕೆ ಬಾರದೆ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದು, ಅವರೂ ಆಮ್ಲಜನಕದ ಕೊರತೆಯಾಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರು ಎರಡು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ಇಬ್ರಾಹಿಂ ಅವರು ಕಳೆದ ಇಪ್ಪತ್ತು ವರ್ಷದಿಂದ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು ಎಂದು ತಿಳಿದು ಬಂದಿದೆ.
ಮಂಗಳೂರು: ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ವಿವಾಹಿತ ಯುವಕನೊರ್ವ ಮಲಗಿದ್ದಲೇ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ.ಮೃತರನ್ನು ಕನೀರುತೋಟ ನಿವಾಸಿ ಜಿತೇಶ್ (28) ಎಂದು ಗುರುತಿಸಲಾಗಿದೆ. ಜಿತೇಶ್ ಅವರು ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಏಳದ ಕಾರಣ, ಮನೆಮಂದಿ ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಜಿತೇಶ್ ಮಂಗಳೂರಿನ ಕೆಟಿಎಂ ಷೋರೂಂ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು ,ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ
ಉಳ್ಳಾಲ : ಮಲಗಿದ್ದಲ್ಲೇ ಹೃದಯಾಘಾತವಾಗಿ ನವವಿವಾಹಿತ ಮೃತಪಟ್ಟ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ. ಕನೀರುತೋಟ ನಿವಾಸಿ ಜಿತೇಶ್ (28) ಸಾವನ್ನಪ್ಪಿದವರು. ಜಿತೇಶ್ ಅವರು ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಏಳದ ಕಾರಣ, ಮನೆಮಂದಿ ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ
ಕಾಸರಗೋಡು: ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಉಂಟಾಗಿ ಅಪಾರ ನಷ್ಟಗಳಾದ ಘಟನೆ ಪೆರ್ಲ ಸಮೀಪದ ಶೇಣಿ ಬಾರೆದಳ ಎಂಬಲ್ಲಿ ನಡೆದಿದೆ. ಬಟ್ಯ ನಾಯ್ಕ ಎಂಬವರ ಹೆಂಚು ಹಾಸಿದ ಮನೆಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಹಿಡಿದು ಅಪಾರ ನಾಶ ನಷ್ಟ ಉಂಟಾಗಿದೆ. ಘಟನೆ ನಡೆದಾಗ ಬಟ್ಯ ನಾಯ್ಕ ಮತ್ತು ಮಗನ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಹೊರಗಡೆ ಓಡಿದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಪತ್ನಿ ಸಮೀಪದ ಹಾಲಿನ ಡೈರಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಡುಗೆ ಕೋಣೆ ಯಿಂದ ಬೆಂಕಿ ತಗಲಿರುವುದಾಗಿ ಶಂಕಿಸಲಾಗಿದೆ. ಮನೆಯೊಳಗಿದ್ದ ಬೆಲೆ ಬಾಳುವ ವಸ್ತು, ನಗದು, ದಾಖಲೆ ಗಳು, ಇಲೆಕ್ಟ್ರಾನಿಕ್ಸ್ ಉಪಕರಣ ಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯ ತಪ್ಪಿಸಿದರು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಸೇರಿಕೊಂಡು ಮನೆಯವರಿಗೆ ವಾಸಿಸಲು ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.
ಉಡುಪಿ ಜಿಲ್ಲೆಯ ಕೋಟ ಸಮೀಪ ಬೈಕ್ ಪಲ್ಟಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಸಮೀಪ ಸಂಭವಿಸಿದೆ. ಮೃತಪಟ್ಟ ಯುವಕ ಕೋಟ ಮಣೂರು ಸುರೇಶ್ ಆಚಾರ್ಯ ಅವರ ಮಗ ವಿಕಾಸ್ ಆಚಾರ್ಯ (22) ಎಂದು ತಿಳಿಯಲಾಗಿದೆ. ಬೈಕ್ ಸವಾರ ರಾತ್ರಿ 1:30 ರ ಸುಮಾರಿಗೆ ಸಾಸ್ತಾನ ದಿಂದ ಕೋಟ ಮಣೂರು ಕಡೆ ಬರುತ್ತಿದ್ದ ವೇಳೆ ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಅಪಘಾತ ನಡೆದ ತಕ್ಷಣ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ರವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಸಾಗಿಸಿರುತ್ತಾರೆ. ಕೋಟ ಪೊಲೀಸ್ ಸ್ಥಳಕ್ಕಾಗಿಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









