ಬಂಟ್ವಾಳ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಉತ್ತರ ಪ್ರದೇಶ ಮೂಲದ ಬಬುಲು ಸಹಾನಿ, ರಾಮ್ ಗೋವಿಂದ ಸಹಾನಿ, ಅಮಿತ್ ಕುಮಾರ್, ಸತ್ಯೇಂದ್ರ ಸಹಾನಿ, ಸೈದಾನ್ ಸಹಾನಿ, ಅಭಯ್ ನಾರಾಯಣ್ ಬಂಧಿತ ಆರೋಪಿಗಳು. ಪರಂಗಿಪೇಟೆಯಲ್ಲಿ ಅಕ್ರಮ ಮರಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಆರು ಮಂದಿಯ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ 2017 ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಇವರು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಊರಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಇದೀಗ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ.ಹಾಗೂ ಪೋಲಿಸ್ ಉಪನಿರೀಕ್ಷಕರುಗಳಾದ ಹರೀಶ್ ಎಂ.ಆರ್,ಮತ್ತು ಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಯೋಗೇಶ್ ಡಿ.ಎಲ್, ವಿಜಯಕುಮಾರ್ ಮಾಹಿತಿ ಸಂಗ್ರಹಿಸಿ ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Author: main-admin
ಸುಳ್ಯ:ತಿಂಗಳ ಹಿಂದೆ ಸಂಪಾಜೆ ಕಲ್ಲುಗುಂಡಿಯ ಗೂನಡ್ಕದಲ್ಲಿ ಹಟ್ಟಿಯಿಂದ ದನ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿದ್ದಾರೆ. ಸುಳ್ಯ ಮರ್ಕುಂಜ ನಿವಾಸಿ ಗಣೇಶ್ ಕಾಯಾರ ಮತ್ತು ಕೇರಳದ ಚೆಂಬೇರಿಯ ನಿವಾಸಿ ಅಬ್ದುಲ್ ಬಂಧಿತ ಆರೋಪಿಗಳು. ಸೆ. 13ರಂದು ತಡರಾತ್ರಿ ಎರಡು ಗಂಟೆ ವೇಳೆಗೆ ಗೂನಡ್ಕದ ವರದರಾಜ್ ಸಂಕೇಶ್ವರ್ ಅವರ ಮನೆಯ ಹಟ್ಟಿಯಲ್ಲಿದ್ದ ಎರಡು ಹಸುಗಳನ್ನು ಪಿಕಪ್ ಗೆ ತುಂಬಿ ಕದ್ದೊಯ್ಯಲಾಗಿತ್ತು. ಆರೋಪಿಗಳ ಚಲನ ವಲನಗಳನ್ನು ಸಿಸಿ ಕ್ಯಾಮೆರಾಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ. ಇದೀಗ ಆರೋಪಿಗಳನ್ನು ಸುಳ್ಯ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು : ನಾಡ ಹಬ್ಬ ದಸರಾ ರಜೆಯನ್ನು ಪದವಿ ಕಾಲೇಜುಗಳಿಗೂ ವಿಸ್ತರಿಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದ್ದು ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸದಿರುವುದು ಹಬ್ಬದ ಸಂಭ್ರಮ ಸವಿಯಲು ಅಡ್ಡಿಯಾಗಿದೆ. ನಾಡಿನ ಪ್ರಮುಖ ಹಬ್ಬ ದಸರಾಗೆ ಪೂರಕವಾಗುವಂತೆ ಪದವಿ ವಿದ್ಯಾರ್ಥಿಗಳಿಗೂ ರಜೆ ನೀಡುವ ಬಗ್ಗೆ ಹಲವಾರು ಪೋಷಕರು ಈಗಾಗಲೇ ಮನವಿ ಮಾಡುತ್ತಿದ್ದು ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಗ್ರಹಿಸಿದರು. ದಸರಾವು ನಾಡಿನ ಅತ್ಯಂತ ಪ್ರಮುಖ ಹಬ್ಬವಾಗಿದ್ದು ಮಂಗಳೂರು ದಸರಾವು ಮೈಸೂರು ನಂತರ ಅತ್ಯಂತ ಜನಾಕರ್ಷಣೆ ಗಳಿಸಿರುವ ಹಬ್ಬವಾಗಿದೆ. ಹೀಗಾಗಿ ನವರಾತ್ರಿಯನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸೇರಿದಂತೆ ಎಲ್ಲರೂ ಸಂಭ್ರಮದಿಂದ ಆಚರಿಸುವಂತಾಗಲು ರಜೆ ನೀಡುವ ಬಗ್ಗೆ ಆದೇಶ ಹೊರಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಮೂಲಕ ಸರ್ಕಾರವನ್ನು ಆಗ್ರಹಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ದಸರಾ ಹಬ್ಬದ ರಜೆಯಲ್ಲಿ ಉಂಟಾಗಿದ್ದ…
ಮಂಗಳೂರು: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಪೋರ್ಕೊಡಿ ನಿವಾಸಿ ಮುಹಮ್ಮದ್ ಮುನಾಝ್, ಕಸಬಾ ಬೆಂಗ್ರೆಯ ನಿವಾಸಿ ಮುಹಮ್ಮದ್ ಅಫ್ರಾರ್, ಬಡಗುಳಿಪಾಡಿ ಗ್ರಾಮದ ನಿವಾಸಿ ರಾಹಿಲ್ ಮೊಯ್ದಿನ್ ಶರೀಫ್, ಮೂಡುಪೆರಾರ ಗ್ರಾಮದ ಗುರುಕಂಬಳದ ನಿವಾಸಿ ಮುಲ್ಲಾ ಅಬ್ದುಲ್ ಅಮನ್ ಮತ್ತು ಕಂದಾವರ ಗ್ರಾಮದ ಅಮಾನುಲ್ಲಾ ಕಂಪೌಂಡ್ ನಿವಾಸಿ ಮುಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ.ಇನ್ನು ಮುನಾಝ್ ಮತ್ತು ಮುಹಮ್ಮದ್ ಅಫ್ರಾರ್ ಕಂಜಾರು ಗ್ರಾಮದ ಪೋರ್ಕೊಡಿ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದು, ರಾಹಿಲ್ ಮೊಯ್ದಿನ್ ಶರೀಫ್, ಮುಲ್ಲಾ ಅಬ್ದುಲ್ ಅಮನ್ ಮತ್ತು ಮುಹಮ್ಮದ್ ಶಾಹಿನ್ ಅವರು ಕೊಳಂಬೆ ಗ್ರಾಮದ ಕಾಲೇಜ್ ಬಳಿ ಹಾಗೂ ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ…
ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ನಿವಾಸಿ ಅಕ್ಷತಾ (25) ಎಂಬ ಮಹಿಳೆಯು ತನ್ನ ಇಬ್ಬರು ಹೆಣ್ಣುಮಕ್ಕಳಾದ ವಿದ್ಯಾಶ್ರೀ (7) ಹಾಗೂ ಮಲ್ಲು (4)ರೊಂದಿಗೆ ಕಾಣೆಯಾಗಿದ್ದಾರೆ.ಅ.6 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಅಕ್ಷತಾ 5 ಅಡಿ ಎತ್ತರ, ಸಾಧಾರಣ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ತುಳು ಭಾಷೆ ಮಾತನಾಡುತ್ತಾರೆ. ವಿದ್ಯಾಶ್ರೀ 3 ಅಡಿ 6 ಇಂಚು ಎತ್ತರ, ಸಪೂರ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮಲ್ಲು 3 ಅಡಿ ಎತ್ತರ, ಸಾಧಾರಣ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮಂಗಳೂರು: ಜನನ ಮತ್ತು ಮರಣ ನೋಂದಣಿಯಲ್ಲಿ ಯಾವುದೇ ವಿಳಂಬ ಸಲ್ಲದು. ಜನಸಾಮಾನ್ಯರನ್ನು ಸತಾಯಿಸಲೂ ಬಾರದು. ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗುವ ಮರಣಗಳಿಗೆ ಸಂಬಂಧಿಸಿ ಕಾರಣಗಳನ್ನು ಸರಿಯಾಗಿ ನಮೂದಿಸಬೇಕು. ಅಲ್ಲದೆ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಡ್ಡಾಯ ವಲ್ಲ. ಬೇರೆ ದಾಖಲೆಗಳನ್ನು ಕೂಡ ಬಳಸಬಹುದಾಗಿದೆ. ಗ್ರಾಮ್ ಒನ್ ಕಚೇರಿಯಲ್ಲಿ ಕೂಡ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಹೇಳಿದ್ದಾರೆ. ದ.ಕ. ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜನನ- ಮರಣ ನೋಂದಣಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸೆಕ್ಷನ್ 18ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಾಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇ.100ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರಿಶೀಲನೆಯನ್ನು ಕಂದಾಯ ಇಲಾಖೆ, ನಗರ ಅಭಿವೃದ್ಧಿ, ಸಾಂಖ್ಯಿಕ ಇಲಾಖೆ ಅಧಿಕಾರಿಗಳು ನಡೆಸಬೇಕು. ಪರಿಶೀಲನಾ ವರದಿಯನ್ನು ಪ್ರತೀ ತೈಮಾಸಿಕಕ್ಕೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಉಡುಪಿ: ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ. 2018ರಲ್ಲಿ ಹೆಜಮಾಡಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೇ ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿ. 17 ವರ್ಷದ ಪ್ರಾಯದ ನೊಂದ ಬಾಲಕಿ ತನ್ನ ಚಿಕ್ಕಮ್ಮಳೊಂದಿಗೆ ತನ್ನ ಅಕ್ಕನ ಜಾಗದ ತಕರಾರಿಗೆ ಸಂಬಂಧಿಸಿದಂತೆ ದಾಖಲೆಗಳ ಬಗ್ಗೆ ವಿಚಾರಿಸಲು ಹೆಜಮಾಡಿ ಗ್ರಾ.ಪಂ.ಕಚೇರಿಗೆ ಹೋಗಿದ್ದು, ಈ ವೇಳೆ ಆರೋಪಿಯು ನೊಂದ ಬಾಲಕಿ ಮತ್ತು ಆಕೆಯ ಚಿಕ್ಕಮ್ಮನನ್ನು ವಾಪಾಸು ಕಳುಹಿಸಿ ಅವರನ್ನು ಹಿಂಬಾಲಿಸಿಕೊಂಡು ಬಂದು ಬಸ್ ನಿಲ್ದಾಣದ ಬಳಿ ನಿಮ್ಮ ಕೆಲಸ ಆಗಿದೆ ಎಂದು ಹೇಳಿ 5 ಸಾವಿರ ರೂ.ಪಡೆದನು. ಅನಂತರ ನೊಂದ ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದನು…
ಬಂಟ್ವಾಳ: ಕಾರುಡಿಕ್ಕಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ. ಬಾಯಿಲ ನಿವಾಸಿ ಪಾವನಾ (23) ಮೃತಪಟ್ಟ ಯುವತಿ. ಪಾವನಾ ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ವೇಳೆಗೆ ಕೆಲಸ ಮುಗಿಸಿ ಅವರು ದಾಸಕೋಡಿಯಲ್ಲಿ ಬಸ್ಸಿನಿಂದ ಇಳಿದು ಮನೆಗೆ ಮರಳುತ್ತಿದ್ದರು. ಸಂಜೆ ಸುಮಾರು 6.30ರ ವೇಳೆಗೆ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆ ಬದಿಯ ತೋಡಿಗೆ ಪಾವನಾ ಎಸೆಯಲ್ಪಟ್ಟಿದ್ದಾರೆ. ಕಾರು ಕೂಡ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪಾವನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ವಿಟ್ಲ : ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಪತ್ತೆಯಾದ ಘಟನೆ ವಿಟ್ಲ ಸಮೀಪದ ಪೆರುವಾಯಿಯಲ್ಲಿ ನಡೆದಿದೆ. ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯೋರ್ವಳು ಪತ್ತೆಯಾಗಿದ್ದು, ಮೂವರೂ ಕೇರಳ ಮೂಲದವರೆನ್ನಲಾಗಿದೆ.ಪೆರುವಾಯಿ ಬಸ್ ನಿಲ್ದಾಣದ ಬಳಿ ಮೂವರು ಅನುಚಿತವಾಗಿ ವರ್ತಿಸುತ್ತಿದ್ದರೆನ್ನಲಾಗುತ್ತಿದ್ದು, ಈ ಬಗ್ಗೆ ಗಮನಿಸಿದ ಸ್ಥಳೀಯರು ಅವರನ್ನು ವಿಚಾರಿಸಿದ್ದು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ದೌಡಾಯಿಸಿದ್ದಾರೆಂದು ವರದಿಯಾಗಿದೆ.
ಮಂಗಳೂರು : ಕಾರಿನಲ್ಲಿ ಆಗಮಿಸಿದ ತಂಡವೊಂದು ನಗರದ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನನ್ನು ಬಲವಂತವಾಗಿ ಅಪಹರಿಸಿ, ತಡೆಯಲು ಬಂದ ತಂದೆಯ ಮೇಲೆ ಹಲ್ಲೆ ನಡೆಸಿದ ಘಟನೆ ಗಡಿ ಭಾಗದ ಕಾಸರಗೋಡು ನಗರದ ಚಕ್ಕರ ಬಝಾರ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಕೊಲ್ಲಂಪಾಡಿಯ ಎ.ಶಾನ್ನವಾಝ್ (38), ತಳಂಗರೆ ಬಾಂಗೋಡ್ನ ಅಬ್ದುಲ್ ಮನಾಫ್ ಎ.ಎಂ.(21), ಅಣಂಗೂರಿನ ಮುಹಮ್ಮದ್ ರಿಯಾಝ್ (25) ಬಂಧಿತ ಆರೋಪಿಗಳು. ಆರೋಪಿಗಳು ಕಾರಿನಲ್ಲಿ ಆಗಮಿಸಿ ಅಂಗಡಿಗೆ ನುಗ್ಗಿ ಮುಟ್ಟತ್ತೋಡಿಯ ಸವಾದ್ ಎಂಬಾತನನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿಕೊಂಡೊಯ್ದಿದ್ದು, ತಡೆಯಲೆತ್ನಿಸಿದ ತಂದೆ ವಿ.ಎಂ.ಅಬೂಬಕರ್ಗೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.










