ವಿಟ್ಲ : ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಗಳ ಪೈಕಿ ಓರ್ವನ ಮನೆ ಕೇಪು ಕಲ್ಲಂಗಳದಲ್ಲಿದ್ದು, ಮೇ 20ರ ಮಂಗಳವಾರ ಕಾರವಾರ ಪೊಲೀಸರು ವಿಟ್ಲ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಿದ್ದಾರೆ.

ಈ ಪ್ರಕರಣ ಸಂಬಂಧಿಸಿದಂತೆ ಒಟ್ಟು 11 ಮಂದಿ ಭಾಗಿಯಾದ ಶಂಕೆಯಿದ್ದು, ಪೊಲೀಸ್ ಇಲಾಖೆ ತನಿಖೆಗೆ ನಡೆಸುತ್ತಿದೆ. ಈ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
3 ಮಂದಿ ವಿದೇಶಕ್ಕೆ ಪಲಾಯನ ಮಾಡಿದ್ದು, ಕೇಪು ಕಲ್ಲಂಗಳ ನಿವಾಸಿ ಮಹಮ್ಮದ್ ಇಸಾಮ್ ಓರ್ವ ಆರೋಪಿಯಾಗಿದ್ದಾನೆ.
ಇಸಾಮ್ ಮನೆಯನ್ನು ಪೊಲೀಸರು ಸರ್ಚ್ ವಾರೆಂಟ್ ಮೇಲೆ ಪರಿಶೀಲಿಸಿ ಮಾಹಿತಿಗಾಗಿ ತಡಕಾಡಿದ್ದಾರೆ. ಸುಮಾರು 2 ಗಂಟೆ ತನಿಖೆ ನಡೆಸಿದ್ದಾರೆಂಬ ಮಾಹಿತಿಯಿದೆ. ಮನೆಯವರ ಜತೆಗೆ ಸಂಪರ್ಕ ಇದೆಯೇ ಮತ್ತು ಆತನ ವಿವಿಧ ಮಾಹಿತಿಯನ್ನು ಈ ಸಂದರ್ಭ ಸಂಗ್ರಹಿಸಿದ್ದಾರೆನ್ನಲಾಗಿದೆ.