ಮಂಗಳೂರು: ಮಂಗಳೂರಿನ ಪೆಟ್ರೋಲ್ ಪಂಪ್ ನಿಂದ ಸಾಲದ ರೂಪದಲ್ಲಿ ಪೆಟ್ರೋಲ್ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ ಬಸ್ ಮಾಲಕಿಯೊಬ್ಬರಿಗೆ ಚೆಕ್ ಅಮಾನ್ಯ ಪ್ರಕರಣದಲ್ಲಿ 5ನೇ ಜೆಎಂಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.

ಮಂಗಳೂರಿನ ಶೇಡಿಗುಡ್ಡೆ ಪಿವಿಎಸ್ ವೃತ್ತದಲ್ಲಿ ಸಿಟಿ ಪ್ಲಾಜಾ ಕಟ್ಟಡದಲ್ಲಿ ಆರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್ ಮತ್ತು ಕೆನರಾ ಬಸ್ ಎಂಬ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಲೋಕೇಶ್ ಶೆಟ್ಟಿ ಅವರ ಪತ್ನಿ ಸುಕನ್ಯಾ ಶೆಟ್ಟಿ ಶಿಕ್ಷೆಗೊಳಗಾದ ಬಸ್ ಮಾಲಕಿಯಾಗಿದ್ದಾರೆ. ಅವರು ಮಂಗಳೂರಿನ ಪ್ರತಿಷ್ಠಿತ ಪೆಟ್ರೋಲ್ ಪಂಪ್ ನಿಂದ ಇಂಧನವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. 2020ರ ಫೆಬ್ರವರಿ ತಿಂಗಳಿನಲ್ಲಿ ಸಾಲ ಪಡೆದುಕೊಂಡಿದ್ದ ಬಿಲ್ ಪಾವತಿಸದೆ ಚೆಕ್ ನೀಡಿ ಅಮಾನ್ಯಗೊಳಿಸಿ ಪೆಟ್ರೋಲ್ ಪಂಪ್ ಮಾಲಕರನ್ನು ವಂಚಿಸಿದ್ದರು.
ಸುಕನ್ಯಾ ಶೆಟ್ಟಿ ಅವರು ನೀಡಿದ ಎರಡು ಚೆಕ್ ಅಮಾನ್ಯಗೊಂಡಿದ್ದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲಕರು ಮಂಗಳೂರಿನ 5ನೇ ಜೆಎಂಎಫ್.ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಜೆಎಂಎಫ್ ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಚಿರಾಗ್ ಅವರು ಆರೋಪಿಗೆ ಎರಡೂ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಹಾಗೂ ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪೆಟ್ರೋಲ್ ಪಂಪ್ ಮಾಲಕರ ಪರ ಮಂಗಳೂರಿನ ನ್ಯಾಯವಾದಿ ಶ್ರೀ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.