ಪುತ್ತೂರು: ಘಟನೆಯನ್ನು ಎಲ್ಲರೂ ವಿಮರ್ಶೆ ಮಾಡಬಹುದು, ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆ ಸೃಷ್ಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಎಸ್ಪಿ ಅರುಣ್ ಕುಮಾರ್ ಪುತ್ತೂರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚರಿಸಿದ್ದಾರೆ.ಈಶ್ವರಮಂಗಲದಲ್ಲಿ ಲಾರಿಯೊಂದರಲ್ಲಿ ಅನಧಿಕೃತ ಗೋ ಸಾಗಾಟ ಪ್ರಕರಣದಲ್ಲಿ 12 ಗೋವುಗಳನ್ನು ವಶಕ್ಕೆ ಪಡೆದು, ಓರ್ವ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಪೋಸ್ಟ್ಗಳನ್ನು ಹರಿಯಬಿಡುವುದಕ್ಕೆ ಸಂಬಂಧಿಸಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೈಯಲ್ಲಿ ಕತ್ತಿ ಹಿಡಿದುಕೊಂಡು ಲಾರಿಯ ಹಗ್ಗ ಮತ್ತು ಟರ್ಪಾಲ್ ಕೊಯ್ಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಒಳಗೊಂಡಂತೆ ಪುತ್ತೂರಿನಲ್ಲಿ ನಡೆದ ಘಟನೆಯ ಬಗ್ಗೆ ಸಮಗ್ರ ವಿವರಣೆ ನೀಡಿರುವ ಎಸ್ಪಿ ಈ ಘಟನೆಯ ನಂತರ ಪೊಲೀಸರ ಜೊತೆಗೆ ಸ್ಥಳೀಯರು ಹಾಗೂ ಹಾಗೂ ಅರುಣ್ ಕುಮಾರ್ ಪುತ್ತಿಲ ಜಾನುವಾರುಗಳನ್ನು ವಾಹನದಿಂದ ಇಳಿಸಿದ್ದಾರೆ.51ಜಾನುವಾರುಗಳ ಇನ್ನಷ್ಟು ಸಾವನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ನಿರೀಕ್ಷಕರು ಅನುಮತಿ ಕೊಟ್ಟಿದ್ದರು. ಈ ಪ್ರಕರಣದಲ್ಲಿ ಯಾವುದೇ ಧಾರ್ಮಿಕ ಸಂಘಟನೆ ಅಥವಾ ವ್ಯಕ್ತಿಯೊಂದಿಗೆ ಪೊಲೀಸರ ಯಾವುದೇ ಸಹಭಾಗಿತ್ವ ಅಥವಾ ದುರುದ್ದೇಶ ಕಂಡುಬಂದಿಲ್ಲ. ಆದರೆ ದೂರವಾಣಿಯಲ್ಲಿ ಮಾತನಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ನಂತರ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶವಿರುವ ತಪ್ಪು ನಿರ್ಣಾಯ ತೆಗೆದುಕೊಂಡಿರುವುದು ಇನ್ಸ್ಪೆಕ್ಟರ್ ಅವರ ತಪ್ಪಾಗಿರುತ್ತದೆ. ಆದ್ದರಿಂದ ಇನ್ಸ್ಪೆಕ್ಟರ್ಗೆ ಚಾರ್ಜ್ ಮೆಮೊ ನೀಡಲಾಗುತ್ತದೆ. ಮುಂದಿನ ದಿವಸಗಳಲ್ಲಿ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ಮಾಡಲು ಅವಕಾಶ ಮಾಡಲು ಅವಕಾಶ ನೀಡದೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.ವಾಹನವನ್ನು ಪೋಲಿಸರೇ ಹಿಂಬಾಲಿಸಿ ಬಳಿಕ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸುವಲ್ಲಿ ಯಾವುದೇ ಸಂಸ್ಥೆಯ ಪಾತ್ರ ಇರುವುದಿಲ್ಲ. ಪ್ರಕರಣವನ್ನು ನ್ಯಾಯಸಮ್ಮತ ತನಿಖೆಗಾಗಿ ಮರುದಿನವೇ ಪುತ್ತೂರು ಉಪವಿಭಾಗದ ವ್ಯಾಪ್ತಿಯಿಂದ ವರ್ಗಾಯಿಸಲಾಯಿತು.
ಈ ಘಟನೆಯ ನಂತರ ಪಿಎಸೈ ಬೆಳ್ಳಾರೆ ಹಾಗೂ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದರು. ಉಳಿದ ಉಳಿದ ಅಧಿಕಾರಿಗಳು ತನಿಖಾ ಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸುತ್ತಿದ್ದರು. ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಆದ್ದರಿಂದ ಅದರಲ್ಲಿ ಇರುವ ಜಾನುವಾರುಗಳನ್ನು ಇಳಿಸಬಹುದೇ ಎಂದು ಕೇಳಿದ್ದಾರೆ. ನಂತರ ಕಾನ್ಸ್ಟೆಬಲ್ ಅವರು ಇನ್ಸ್ಪೆಕ್ಟರ್ಗೆ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್ ಪುತ್ತಿಲ ಕಾನ್ಸ್ಟೆಬಲ್ ರಲ್ಲಿ ಮೊಬೈಲ್ ಕೇಳಿ ಪಡೆದುಕೊಂಡು ಇನ್ಸ್ಪೆಕ್ಟರ್ ಜೊತೆ ಮಾತನ ಮಾತನಾಡಿದ್ದಾರೆ. ಅದಕ್ಕೆ ಇನ್ಸ್ಪೆಕ್ಟರ್ ಅನುಮತಿ ಕೊಟ್ಟಿರುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯು ಬೇರೆಯದೇ ರೀತಿಯಲ್ಲಿ ಪ್ರಚಾರಗೊಂಡಿರುತ್ತದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




