ಉಡುಪಿ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೋಡಗಿರುವ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಅವರಿಂದ ನಗದು, ಕಾರು ಮತ್ತು ಮೊಬೈಲ್ ಸೇರಿ ಒಟ್ಟು 12,16,700 ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಕುಂದಾಪುರ ಕೊರ್ಗಿಯ ಸಂದೀಪ್ (34), ಕುಂದಾಪುರ ಬೇಳೂರಿನ ಶ್ರೀರಾಜ್ (33) ಹಾಗೂ ಮೊಳಹಳ್ಳಿಯ ಮಧುಕರ್ (44) ಎಂದು ಗುರುತಿಸಲಾಗಿದೆ.
ಇವರು ಐಪಿಎಲ್ ಪಂದ್ಯಗಳ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ, ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡ ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಿಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಈ ಮೂವರು ಸಂಜೆ ಅಜ್ಜರಕಾಡಿನ ಭುಜಂಗ ಪಾರ್ಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಪಾರ್ಕರ್ ಎಂಬ ಬೆಟ್ಟಿಂಗ್ ಮೊಬೈಲ್ ಆ್ಯಪ್ ಸಹಾಯದಿಂದ ತಮ್ಮ ಸ್ಮಾರ್ಟ್ ಫೋನ್ ಮೂಲಕ ಐಪಿಎಲ್ನಲ್ಲಿ ಹೈದರಾಬಾದ್ನ ಸನ್ರೈಸರ್ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ನಡೆದ ಟಿ20 ಮ್ಯಾಚ್ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ನ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಬಳಿ ಸಾರ್ವಜನಿಕರಿಂದ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ನಿಂದ ಸಂಗ್ರಹಿಸಿದ್ದ 81,700ರೂ. ನಗದು, 1.35 ಲಕ್ಷ ರೂ. ಮೌಲ್ಯದ 4 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಸೆನ್ ಪೊಲೀಸ್ ಉಪಾಧೀಕ್ಷಕರಾದ ಎ.ಸಿ ಲೋಕೇಶ್, ಪೊಲೀಸ್ ನಿರೀಕ್ಷಕ ರಾದ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಪವನ್ ನಾಯಕ್, ಎ.ಎಸ್.ಐ ಉಮೇಶ್ ಮತ್ತು ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್, ರಾಘವೇಂದ್ರ, ರಾಜೇಶ್, ಸಂತೋಷ, ಅರುಣ್ ಕುಮಾರ್, ದಿಕ್ಷೀತ್, ನಿಲೇಶ್, ಪವನ್, ಮಾಯಪ್ಪ, ಜ್ಯೋತಿ, ವೈಶಾಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳ ವಿರುದ್ಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಮೇ 6ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.