ಉಡುಪಿ: ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ತಲವಾರಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿರಿಯಡ್ಕ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಣಜಾರು ಪರಾರಿ ಮನೆ ನಿವಾಸಿ ಮಂಜುನಂದ ಹೆಗ್ಡೆ(49) ಹಾಗೂ ಕೊಪ್ಪಲ ನಿವಾಸಿ ಜಗದೀಶ್ ಹೆಗ್ಡೆ(48) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳಲಾಗಿದೆ.
ನ.15ರಂದು ರಾತ್ರಿ ವೇಳೆ ಶಿವರಾಜ್ ಎಂಬವರು ಕೆಲಸ ಮುಗಿಸಿ ವಾಪಾಸ್ಸು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಣಜಾರು ಗ್ರಾಮದ ಕೊಪ್ಪಲ ಎಂಬಲ್ಲಿ ಮಂಜುನಂದ ಹೆಗ್ಡೆ ಅಡ್ಡಗಟ್ಟಿ ತಲವಾರಿನಲ್ಲಿ ತಲೆಗೆ ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದನು.
ಬೈಕ್ನಿಂದ ಕೆಳಗೆ ಬಿದ್ದ ಶಿವರಾಜ್ಗೆ ಮಂಜುನಂದ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಮಂಜುನಂದ ಹೆಗ್ಡೆ ಜೊತೆ ಜಯಾನಂದ ಹೆಗ್ಡೆ, ಚಂದ್ರಹಾಸ ಹೆಗ್ಡೆ ಹಾಗೂ ಇತರ 7 ರಿಂದ 8 ಮಂದಿ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್ ನೇತೃತ್ವದ ತಂಡ, ಪ್ರಕರಣದ ಆರೋಪಿ ಕೊಪ್ಪಲ ನಿವಾಸಿ ಜಗದೀಶ್ ಹೆಗ್ಡೆಯನ್ನು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.




