ಮಂಜೇಶ್ವರ: ದಂಪತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈಯಲು ಪ್ರಯತ್ನ ಪಟ್ಟ ಘಟನೆ ಮಂಜೇಶ್ವರ ಕುಂಡುಕೊಳಕೆ ಸಮುದ್ರ ತೀರದಲ್ಲಿ ನಡೆದಿದೆ. ಪತ್ನಿಯನ್ನು ಸ್ಥಳೀಯರು ಉಳಿಸಿದರೆ, ಪತಿ ಸಾವಿಗೀಡಾಗಿದ್ದಾರೆ.
ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂಬಾರು ನೀರೋಲ್ಪೆ ನಿವಾಸಿ, ಹೊಸಂಗಡಿ ಎಸ್ ಎ ಟೈಲರ್ ಮಾಲಕ ಭಾಸ್ಕರ್ ನೀರೋಲ್ಪೆ (60) ಸಾವಿಗೀಡಾದ ವ್ಯಕ್ತಿ.

ಶನಿವಾರ ಸಂಜೆ ಸಮಯದಲ್ಲಿ ಈ ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಪೊಲೀಸರು ಭಾನುವಾರ ಬೆಳಗ್ಗಿನ ಸಮಯದಿಂದಲೇ ಹುಡುಕಾಟ ಮಾಡಲು ಪ್ರಾರಂಭ ಮಾಡಿದ್ದು, ಭಾಸ್ಕರ್ ಅವರ ಶವ ಅಪರಾಹ್ನ 3 ಗಂಟೆ ಸಮಯದಲ್ಲಿ ಉಪ್ಪಳ ಮುಸೋಡಿ ಅಧಿಕದ ಸಮುದ್ರದಲ್ಲಿ ಪತ್ತೆಯಾಗಿದೆ.
ನಂತರ ಮೃತದೇಹವನ್ನು ಬೋಟ್ ಮೂಲಕ ದಡಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಗೆಂದು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪತ್ನಿ ಮಾಲತಿ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.