ಬಿಹಾರದಿಂದ ಮಂಗಳೂರಿಗೆ ರೈಲಿನ ಮೂಲಕ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಿಹಾರ ರಾಜ್ಯದ ನಿವಾಸಿಗಳಾದ ಕೃಷ್ಣಾಪುರದಲ್ಲಿ ವಾಸವಿರುವ ಸುನಿಲ್ ಕುಮಾರ್ ಮತ್ತು ಬ್ರಿಜೇಶ್ ಶ್ರೀವತ್ಸ ಬಂಧಿತ ಆರೋಪಿಗಳು.
ಜ. 3ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ಸುಮಾರು 1 ಕೆಜಿ ತೂಕದ ಮಾದಕವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಬಜಪೆ ಪೊಲೀಸರು ದಾಳಿ ನಡೆಸಿದ್ದರೆ.
ಈ ವೇಳೆ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 1 ಕೆ.ಜಿ ಮಾದಕ ವಸ್ತು ಗಾಂಜಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಂಧಿತರು ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಿಂದ ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಬಜಪೆ ಪೊಲೀಸರು ಎನ್.ಡಿ.ಪಿ.ಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




