ಮೂಡುಬಿದಿರೆ: ದ.ಕ.ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ವಿವಾಹಿತೆಯೊಬ್ಬರ ಮೃತದೇಹ ಆಕೆಯ ಪ್ರಿಯಕರನೊಂದಿಗೆ ಬಾವಿಯಲ್ಲಿ ಪತ್ತೆಯಾಗಿದೆ.

ಬಡಗಮಿಜಾರು ನಿವಾಸಿ, ಎರಡು ಮಕ್ಕಳ ತಾಯಿ ನಮಿಕ್ಷಾ ಶೆಟ್ಟಿ(29) ಹಾಗೂ ಆಕೆಯ ಪ್ರಿಯಕರ ಬಾಗಲಕೋಟೆ ಮೂಲದ, ಸದ್ಯ ನಿಡ್ಡೋಡಿ ನಿವಾಸಿ ಪ್ರಶಾಂತ್ ಮೃತಪಟ್ಟವರು.
ನಮೀಕ್ಷಾ ಶೆಟ್ಟಿಗೆ ವಿವಾಹವಾಗಿದ್ದು, ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಇವರ ಪತಿ ಸತೀಶ್ ಪೂನಾದಲ್ಲಿದ್ದಾರೆ ಎನ್ನಲಾಗಿದೆ. ನಮೀಕ್ಷಾ ಶೆಟ್ಟಿ ಪತಿಯೊಂದಿಗೆ ಸಂಸಾರ ಸರಿ ಬಾರದೆ ತನ್ನ ಮಕ್ಕಳೊಂದಿಗೆ ತವರು ಮನೆ ಸೇರಿದ್ದರು. ಈ ನಡುವೆ, ನಮೀಕ್ಷಾ ಶೆಟ್ಟಿಗೆ ಇನ್ಸ್ಟಾಗ್ರಾಂ ಮೂಲಕ ಪ್ರಶಾಂತ್ನ ಪರಿಚಯವಾಗಿದೆ. ಪ್ರಶಾಂತ್ಗೆ ಮದುವೆಯಾಗಿ ವಿಚ್ಛೇದನ ಆಗಿದೆ.
ಪ್ರಿಯಕರ ಪ್ರಶಾಂತ್ ಆಗಾಗ ನಮೀಕ್ಷಾ ಶೆಟ್ಟಿ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದಿದ್ದು, ಈ ಸಂದರ್ಭ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪ್ರಶಾಂತ್ ಆಕೆಯನ್ನು ಬಾವಿಗೆ ದೂಡಿದ್ದು, ಇದನ್ನು ನಮೀಕ್ಷಾಳ ಪುತ್ರ ನೋಡಿದ್ದಾನೆ. ಇದರಿಂದ ಭೀತಿಗೊಳಗಾದ ಪ್ರಶಾಂತ್ ತಾನೂ ಬಾವಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.