ಮಂಗಳೂರು: ನಗರದ ನಂತೂರು ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪ್ತಿಯ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಕದ್ರಿ ಪೊಲೀಸ್ ಠಾಣೆಯ ಬಳಿ ತಂದು ಪ್ರತಿಭಟನೆ ನಡೆಸಿದ ಆರೋಪದಡಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಲ್ಲಾಳ್ಬಾಗ್ ಸಮೀಪದ ವಿವೇಕನಗರದ ಅಮೀತ್, ಕೀರ್ತನ್, ನವೀತ್, ಭರತ್ರಾಜ್, ಪವನ್, ಲೋಕೇಶ್ ಮಂಗಳಾದೇವಿ, ಮನ್ವೀತ್ ಬಲ್ಲಾಳ್ಬಾಗ್, ಅನಿಲ್ ಕುಮಾರ್ ಕಂಕನಾಡಿ, ಪ್ರೇಮನಾಥ ಬಲ್ಲಾಳ್ಬಾಗ್ ಹಾಗೂ ಇತರ ಸುಮಾರು 50 ಮಂದಿ ದ್ವಿಚಕ್ರ ವಾಹನ ಮತ್ತು ಕಾರಿನಲ್ಲಿ ಆಂಬುಲೆನ್ಸ್ನೊಂದಿಗೆ ಬಂದು ಕದ್ರಿ ಪೊಲೀಸ್ ಠಾಣೆಯ ಬಳಿ ಅಕ್ರಮಕೂಟ ಸೇರಿ ಪ್ರತಿಭಟನೆ ನಡೆಸಿದ್ದಾರೆ.
ಈ ರೀತಿ ಪ್ರತಿಭಟನೆ ಮಾಡುವುದು ಸರಿಯಲ್ಲವೆಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರೂ ಕೇಳದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸಾರ್ವಜನಿಕ ವಾಹನ ಸಂಚಾರಕ್ಕೂ ಇದರಿಂದ ಅಡಚಣೆಯಾಗಿದೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




