ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನವನದ ಸರಕಾರಿ ಸ್ಥಳದಲ್ಲಿ ಬೆಳೆದು ನಿಂತಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆಯ ವಿಜಿಲೆನ್ಸ್ ಸ್ಕ್ವಾಡ್ ಮರದ ಡಿಪೋ ಮಾಲಕ ಸಹಿತ ಇಬ್ಬರ ಮೇಲೆ ಪ್ರಕರಣ ದಾಖಲಿಸಿದೆ.
ಜೆಪ್ಪು ಮಾರ್ಕೇಟ್ ಬಳಿಯ ನಿವಾಸಿ ಮನೋಜ್ ಎ.(38) ಮತ್ತು ವಾಮಂಜೂರು ಬಳಿಯ ಮೂಡುಶೆಡ್ಡೆ ಬಡಕೆರೆ ಜಾರ ನಿವಾಸಿ ಲಕ್ಷಣ್(41) ಎಂಬ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಪಿಲಿಕುಳ ಜೈವಿಕ ಉದ್ಯಾನವನದ ಅಕೇಶಿಯಾ ಹಾಗೂ ಗಾಳಿ ಮರಗಳನ್ನು ಕಡಿದಿದ್ದಾರೆ.
ಪಿಲಿಕುಳದಲ್ಲಿ ಪರವಾನಿಗೆ ಇದ್ದೂ ಕಡಿದರೂ ಮರಗಳು ಅರಣ್ಯ ಇಲಾಖೆಗೆ ಸೇರಬೇಕು. ಆದರೆ ಇಲ್ಲಿ ಕಡಿದ ಮರಗಳ ದಿಮ್ಮಿಗಳನ್ನು ಲಕ್ಷ್ಮಣ ಎಂಬಾತನ ಖಾಸಗಿ ಡಿಪೋಗೆ ಸಾಗಾಟ ಮಾಡಲಾಗಿದೆ. ಪಿಲಿಕುಳ ಜೈವಿಕ ಉದ್ಯಾನವನದೊಳಗಡೆ ಯಾವುದೇ ಕಾಮಗಾರಿ ಆಗಬೇಕಾದರೂ ಟೆಂಡರ್ ಕರೆಯಬೇಕು. ಆದರೆ ಯಾವುದೇ ಟೆಂಡರ್ ಇಲ್ಲದೆ, ಆದೇಶ ಪ್ರತಿಯನ್ನು ಪಡೆಯದೆ ಆರೋಪಿಗಳು ಮರ ಕಡಿಯುತ್ತಿದ್ದರು. ಆದ್ದರಿಂದ ಅರಣ್ಯ ಇಲಾಖೆ ದಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಪಡಿಸಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿದೆ.




