ಮಂಗಳೂರು: ಮಂಗಳೂರಿನಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ಸರ್ವೆ ಇಲಾಖೆಯ ಅಧಿಕಾರಿಯೊಬ್ಬರ ಮನೆ ಮತ್ತು ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಕಳೆದ ಒಂದು ಗಂಟೆಯಿಂದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂರು ಕಾರುಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ತಂಡವು, ಮಂಗಳೂರಿನ ಬಿಜೈ 8ನೇ ಕ್ರಾಸ್ನಲ್ಲಿರುವ ಸರ್ವೆ ಅಧಿಕಾರಿ ಮಂಜುನಾಥ್ ಅವರ ಮನೆಗೆ ನುಗ್ಗಿ ಪರಿಶೀಲನೆ ನಡೆಸುತ್ತಿದೆ. ಮೂರು ಅಂತಸ್ತಿನ ಈ ಮನೆಯಲ್ಲಿ ಮಂಜುನಾಥ್ ಅವರ ಕುಟುಂಬ ವಾಸಿಸುತ್ತಿದೆ.

ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರು ಸದ್ಯ ಸರ್ವೆ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಮಕೂರು ಮೂಲದವರಾದ ಮಂಜುನಾಥ್ ಅವರ ಕುರಿತು ಲೋಕಾಯುಕ್ತಕ್ಕೆ ನಿರ್ದಿಷ್ಟ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿಯ ಕುರಿತು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.