ಮಂಗಳೂರು: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ 10 ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಅನೀಶ್ ಕುಮಾರ್ ಎಂಬ ಮಗು ಮೃತಪಟ್ಟಿದೆ.
ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಘಟನೆ ಸಂಭವಿಸಿದೆ. ಅಸ್ವಸ್ಥಗೊಂಡಿದ್ದ ಮಗುವನ್ನು ಮಧ್ಯಾಹ್ನ 3.30ರ ವೇಳೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಭಾನುವಾರ ಬೆಳಗ್ಗೆ 10.25ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ಈ ಬಗ್ಗೆ ಮಗುವಿನ ತಾಯಿ ಲಕ್ಷ್ಮೀದೇವಿ ಪ್ರತಿಕ್ರಿಯಿಸಿ, “ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡು ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಎಸೆಯದಂತೆ ಗಂಡನಿಗೆ ಹಲವು ಬಾರಿ ತಿಳಿಸಿದ್ದೆ. ಹೀಗಿದ್ದರೂ ನಿರ್ಲಕ್ಷಿಸಿದ ಪರಿಣಾಮ ಮಗುವಿನ ಪ್ರಾಣ ಹೋಗಿದೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಮಗುವಿನ ತಂದೆ ವೆಡ್ಡಿಂಗ್ ಈವೆಂಟ್ ಡೆಕೊರೇಶನ್ ಕೆಲಸ ಮಾಡಿಕೊಂಡಿದ್ದಾರೆ. ಜೂನ್ 14ರಂದು ಮಧ್ಯಾಹ್ನ ಮಗು ಆಟವಾಡುತಿದ್ದಾಗ ತಂದೆ ಸೇದಿ ಬಿಸಾಡಿದ್ದ ಬೀಡಿಯನ್ನು ನುಂಗಿ ಅಸ್ವಸ್ಥವಾಗಿದೆ. ಮಗುವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮಗುವನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡು, ಚಿಕಿತ್ಸೆ ನೀಡುತ್ತಿದ್ದರು. ಆದರೆ, ಜೂನ್ 15ರಂದು ಬೆಳಗ್ಗೆ 10.25 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.