ಉಡುಪಿ: ಕಾರನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಹೋಗುತ್ತಿದ್ದ ಆರೋಪದಲ್ಲಿ ಕೇರಳದ ಯುವಕನೋರ್ವನನ್ನು ಮಣಿಪಾಲ ಪೊಲೀಸರು ಕಾರು ಸಹಿತ ವಶಕ್ಕೆ ಪಡೆದುಕೊಂಡ ಘಟನೆ ಆ.11ರಂದು ಬೆಳಗ್ಗೆ ಮಣಿಪಾಲ ಎಂಐಟಿ ಜಂಕ್ಷನ್ ಬಳಿ ನಡೆದಿದೆ.
ಮಣಿಪಾಲ ಅಂಚೆ ಕಚೇರಿ ಎದುರು ಕೇರಳ ಕಣ್ಣೂರಿನ ಕಂಡಗನ್ ನಿವಾಸಿ ಶೋಹೈಲ್ ನೀಲಾಕತ್(26) ಎಂಬಾತ ತನ್ನ ಕಾರಿಗೆ ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ, ವಿಪರೀತ ಕರ್ಕಶ ಶಬ್ದ ಮಾಡಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದನೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಕಾರನ್ನು ಹಿಂಬಾಲಿಸಿ, ಮಣಿಪಾಲ ಎಂಐಟಿ ಜಂಕ್ಷನ್ ಬಳಿ ಚಾಲಕ ಸಹಿತ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



