ಮಂಗಳೂರಿನ ಬಜ್ಪೆ ಎಡಪದವು ಎಂಬಲ್ಲಿ ಯುವಕನೋರ್ವನ ಮೇಲೆ ತಲವಾರ್ ದಾಳಿ ನಡೆಸಿದ ದುಷ್ಕರ್ಮಿಗಳ ಪೈಕಿ ಓರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ಎಂಬವರ ಮೇಲೆ ನಾಲ್ಕು ಮಂದಿಯ ತಂಡ ತಲವಾರು ದಾಳಿ ನಡೆಸಿದೆ. ಹಲ್ಲೆಗೆ ಒಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಬೈಕಿನಲ್ಲಿ ನಾಲ್ವರು ಕುಳಿತುಕೊಂಡು, ಕೈಯಲ್ಲಿ ತಲವಾರು ಹಿಡಿದುಕೊಂಡು ಸಾಗುತ್ತಿದ್ದುದ್ದನ್ನು ಅಖಿಲೇಶ್ ನೋಡಿದ್ದರು. ಈ ಕುರಿತು ವಿಡಿಯೊ ಚಿತ್ರೀಕರಿಸಲು ಅವರನ್ನು ಹಿಂಬಾಲಿಸಿದ್ದರು. ಬೈಕಿನಲ್ಲಿ ಸಾಗುತ್ತಿದ್ದ ಕಿಡಿಗೇಡಿಗಳು ಅಖಿಲೇಶ್ ಅವರತ್ತ ತಲವಾರು ಬೀಸಿದ್ದು ಕೈಗಳಿಗೆ ಗಾಯಗಳಾಗಿವೆ. ಆ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ . ಘಟನಾ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಿದ್ದು, ಆರೋಪಿಗಳು ಈ ಘಟನೆಗೂ ಮುನ್ನ ಬಾರ್ ಒಂದರಿಂದ ಹೊರಗೆ ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಹೀಗಾಗಿ ಆರೋಪಿಗಳೆಲ್ಲರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



