ಬೆಂಗಳೂರು: ನಗರದ ವಿವಿಧೆಡೆ ಬಿಎಸ್ಎನ್ಎಲ್ ಸಿಬ್ಬಂದಿಯ ಸೋಗಿನಲ್ಲಿ ಬೆಲೆಬಾಳುವ ಕಾಪರ್ ವೈರ್ ಹಾಗೂ ಮಾಡ್ಯೂಲ್ಗಳನ್ನು ಕದಿಯುತ್ತಿದ್ದ ಉತ್ತರ ಪ್ರದೇಶ ಮೂಲದ ಮೂವರು ಹೈಟೆಕ್ ಅಂತರರಾಜ್ಯ ಕಳ್ಳರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ತಾಮ್ರದ ಕೇಬಲ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ರವಿ ಚೌಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಬಂಧಿತ ಆರೋಪಿಗಳಾಗಿದ್ದು, ಇವರೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಶೋಯೆಜ್ ಎಂಬಾತ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ. ಬಿಎಸ್ಎನ್ಎಲ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ದೊಡ್ಡ ಜಾಲವನ್ನು ಭೇದಿಸಿದ್ದಾರೆ.
ಈ ಗ್ಯಾಂಗ್ನ ಕಳ್ಳತನದ ಶೈಲಿ ಪೊಲೀಸರನ್ನೇ ಬೆರಗುಗೊಳಿಸಿದೆ. ಆರೋಪಿಗಳು ಕಳ್ಳತನ ಮಾಡುವ ಉದ್ದೇಶದಿಂದಲೇ ಉತ್ತರ ಭಾರತದಿಂದ ಬೆಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದರು. ನಗರಕ್ಕೆ ಬಂದಿಳಿದ ನಂತರ ಸಾರ್ವಜನಿಕರಿಗೆ ಯಾವುದೇ ಅನುಮಾನ ಬಾರದಂತೆ ಬಿಎಸ್ಎನ್ಎಲ್ ಸಿಬ್ಬಂದಿಯಂತೆ ನೀಲಿ ಬಣ್ಣದ ಸಮವಸ್ತ್ರ ಧರಿಸುತ್ತಿದ್ದರು. ರಿಪೇರಿ ಕೆಲಸದ ನೆಪದಲ್ಲಿ ಫುಟ್ಪಾತ್ಗಳ ಬಳಿ ಬರುತ್ತಿದ್ದ ಇವರು, ಪಿಕಾಸಿ, ಸುತ್ತಿಗೆ ಹಾಗೂ ಕಟರ್ಗಳನ್ನು ಬಳಸಿ ಕೇಬಲ್ ಪಿಲ್ಲರ್ಗಳನ್ನು ಒಡೆದು ತಾಮ್ರದ ತಂತಿಗಳನ್ನು ಕದಿಯುತ್ತಿದ್ದರು.
ಬಂಧಿತರು ಕೇವಲ ಬೆಂಗಳೂರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ದಿನಕ್ಕೊಂದು ನಗರವನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ತನಿಖೆಯ ವೇಳೆ ಇವರಿಂದ ಸುಮಾರು 4,140 ಮಾಡ್ಯೂಲ್ಗಳು ಮತ್ತು 60 ಮೀಟರ್ಗಳಿಗೂ ಹೆಚ್ಚು ಉದ್ದದ ತಾಮ್ರದ ಕೇಬಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಳ್ಳತನದಿಂದಾಗಿ ಬೆಂಗಳೂರಿನ ಮಲ್ಲೇಶ್ವರಂ, ಸದಾಶಿವನಗರ, ಮತ್ತಿಕೆರೆ ಹಾಗೂ ಯಶವಂತಪುರ ಭಾಗಗಳಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ಸಂಪರ್ಕದಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು.
ಕದ್ದ ಮಾಲುಗಳನ್ನು ಸಾಗಿಸಲು ಇವರು ರೈಲು ಮಾರ್ಗವನ್ನು ಬಳಸುತ್ತಿದ್ದರು. ವಿಮಾನದಲ್ಲಿ ಬಂದು ಕಳ್ಳತನ ಮಾಡಿ, ಭಾರವಾದ ಮಾಲಿನೊಂದಿಗೆ ರೈಲಿನಲ್ಲಿ ಪರಾರಿಯಾಗುವುದು ಇವರ ರೂಢಿಯಾಗಿತ್ತು. ಪ್ರಸ್ತುತ ಯಶವಂತಪುರ ಠಾಣೆಯಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಟೆಲಿಗ್ರಾಫ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.




