ಮಂಗಳೂರು : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾ ಬಂಧಿಯೊಬ್ಬ ಕಾರಾಗೃಹಕ್ಕೆ ಮರಳುವಾಗ ಗುದದ್ವಾರದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟು ತಂದಿದ್ದ ಘಟನೆ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಈ ಸಂಬಂಧ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಹಮ್ಮದ್ ತೋಹಿದ್ ಎಂಬ ವಿಚಾರಣಾ ಬಂಧಿಯನ್ನು ಏಪ್ರಿಲ್ 24ರಂದು ಚಿಕಿತ್ಸೆಗಾಗಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 29ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಸಂಜೆ 5:15ಕ್ಕೆ ಬೆಂಗಾವಲು ಸಿಬ್ಬಂದಿಯೊಂದಿಗೆ ಕಾರಾಗೃಹದ ಮುಖ್ಯದ್ವಾರಕ್ಕೆ ಆತನನ್ನು ಕರೆತರಲಾಯಿತು.
ಮುಖ್ಯದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಐಎಸ್ಎಫ್ (KSISF) ಸಿಬ್ಬಂದಿಗಳು ಎಚ್ಎಚ್ಎಂಡಿ (HHMD) ಯಂತ್ರದ ಮೂಲಕ ತಪಾಸಣೆ ನಡೆಸಿದಾಗ ಬಂಧಿಯ ಗುದದ್ವಾರದ ಬಳಿ ಅನುಮಾನಾಸ್ಪದ ಶಬ್ದ ಕೇಳಿಬಂದಿದೆ. ಅಧೀಕ್ಷಕರು ಸ್ಥಳಕ್ಕೆ ಬಂದು ವಿಚಾರಿಸಿದಾಗ, ತಾನು ಗುದದ್ವಾರದಲ್ಲಿ ಮೊಬೈಲ್ ಇಟ್ಟುಕೊಂಡಿರುವುದಾಗಿ ತೋಹಿದ್ ಒಪ್ಪಿಕೊಂಡಿದ್ದಾನೆ. ಕೂಡಲೇ ಆತನನ್ನು ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಆತನ ಗುದದ್ವಾರದಿಂದ ಒಂದು ಸಣ್ಣ ಗಾತ್ರದ ಮೊಬೈಲ್ ಫೋನ್ (SIA VANTAGE Pro Mini27) ಹೊರತೆಗೆಯಲಾಗಿದೆ.




