ವಿಜಯಪುರ: ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಮುಖ್ಯ ಆರೋಪಿ ಮಹೇಶ್ ತಳವಾರ್ ಮೇಲೆ ಫೈರಿಂಗ್ ನಡೆದಿದೆ.
ಕಾಲಿಗೆ ಗುಂಡು ಹಾರಿಸಿ ಚಡಚಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಮಹೇಶ್ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಮಹೇಶನನ್ನ ಬಂಧಿಸಲು ಹೋದಾಗ ಓಡಿ ಹೋಗಲು ಯತ್ನಿಸಿದ ಮಹೇಶ್ ತಳವಾರ್ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ಕೂಡ ದಾಳಿಗೆ ಯತ್ನಿಸಿದ್ದಾನೆ. ಆಗ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೆ ಮಹೇಶ್ ಇದಕ್ಕೆ ಜಗ್ಗದೆ ಕಲ್ಲಿನ ದಾಳಿ ನಡೆಸಿದ್ದಾನೆ. ಹೀಗಾಗಿ ಕಾಲಿಗೆ ಗುಂಡು ಹಾರಿಸಿ ಮಹೇಶ್ ಬಂಧನ ಮಾಡಿದ್ದಾರೆ.
ಮಹೇಶ್ ಬಲಗಾಲಿಗೆ ಚಡಚಣ ಸಿಪಿಐ ಪರಶುರಾಮ್ ಮನಗೂಳಿ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಮಹೇಶ್ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ವೇಳೆ ಚಡಚಣ ಠಾಣೆ ಸಿಬ್ಬಂದಿ ಶೇಖರ್ ಪವಾರ್, ವಿಜಯಕುಮಾರ್ ಬನಸೋಡೆಗೆ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಸಿಬ್ಬಂದಿಯನ್ನ ದಾಖಲಿಸಲಾಗಿದೆ.
ಮೇ 29 ರಂದು ಭೀಮಾತೀರದ ಗೋವಿಂದಪುರ ಗ್ರಾಮ ಜಮೀನಿನಲ್ಲಿ ಚಡಚಣದ ನಿರಾಳೆ ಕುಟುಂಬ 5 ಜನ ಹಾಗೂ ಇನ್ನೋರ್ವ ಸೇರಿ 6 ಜನರ ಭೀಕರ ಹತ್ಯೆ ನಡೆದಿತ್ತು. ಕೊಲೆಗೆ ಆರೋಪಿ ಮಹೇಶ್ & ಗ್ಯಾಂಗ್ 15 ಲಕ್ಷಕ್ಕೆ ಸುಪಾರಿ ಪಡೆದಿತ್ತು. 6 ಜನರ ಸಾಮೂಹಿಕ ಹತ್ಯೆಗೆ ಮಹೇಶ್ ತಳವಾರ್ ಹುಡುಗರನ್ನ ಸೇರಿಸಿದ್ದ. ಕಳೆದ 23 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದ ಮಹೇಶ್ ಈಗ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.




