ಮಂಗಳೂರು: ದಕ್ಷಿಣ ರೈಲ್ವೆ ಹಾಗೂ ನೈಋತ್ಯ ರೈಲ್ವೆ ವಲಯಗಳ ನಡುವೆ ಹಂಚಿಕೆಯಾಗಿದ್ದ ಕರಾವಳಿಯ ರೈಲ್ವೆ ಜಾಲವನ್ನು ಕೊನೆಗೂ ಒಂದೇ ಆಡಳಿತಾತ್ಮಕ ವಿಭಾಗದಡಿ ತರಲು ಭಾರತೀಯ ರೈಲ್ವೆ ಪ್ರಮುಖ ನಿರ್ಧಾರ ಕೈಗೊಂಡಿದೆ. ಉಳ್ಳಾಲದವರೆಗಿನ ಮಂಗಳೂರು ರೈಲು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಇಂಟರ್ಚೇಂಜ್ ಪಾಯಿಂಟ್ ಬದಲಾವಣೆ
ಪ್ರಸ್ತುತ ಪಡೀಲ್ನಲ್ಲಿರುವ ದಕ್ಷಿಣ ಹಾಗೂ ನೈಋತ್ಯ ರೈಲ್ವೆ ವಲಯಗಳ ನಡುವಿನ ಪರಿವರ್ತನಾ ಕೇಂದ್ರ (ಇಂಟರ್ಚೇಂಜ್ ಪಾಯಿಂಟ್) ಶೀಘ್ರದಲ್ಲೇ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ಈ ಬದಲಾವಣೆಗೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯದಿಂದ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.
ಇದೇ ವೇಳೆ, ತೋಕೂರು ರೈಲು ನಿಲ್ದಾಣವು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದೆ. ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಪ್ರಮುಖ ವಿನಿಮಯ ಕೇಂದ್ರವಾಗಿ ತೋಕೂರು ಸೇವೆ ಸಲ್ಲಿಸಲಿದೆ.
ಮಂಗಳೂರು ರೈಲು ಜಾಲವನ್ನು ಒಂದೇ ಸೂರಿನಡಿ ತರಬೇಕೆಂಬುದು ಕರಾವಳಿ ಭಾಗದ ಸಾರ್ವಜನಿಕರು ಹಾಗೂ ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿತ್ತು. ಈ ಹೊಸ ವ್ಯವಸ್ಥೆಯಿಂದಾಗಿ ವಿಭಾಗೀಯ ಹಂಚಿಕೆಯಿಂದ ಎದುರಾಗುತ್ತಿದ್ದ ಗೊಂದಲಗಳು ನಿವಾರಣೆಯಾಗಲಿವೆ.




