ಗಾಜಿಯಾಬಾದ್: ಮೃತಪಟ್ಟಿದ್ದಾರೆ ಎಂದು ಭಾವಿಸಿ , ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಮರುದಿನ ಬೆಳಿಗ್ಗೆಯೇ ವ್ಯಕ್ತಿಯೊಬ್ಬರು ಮನೆಗೆ ಮರಳಿದ ಪ್ರಸಂಗ ಗಾಜಿಯಾಬಾದ್ ನಲ್ಲಿ ನಡೆದಿದೆ.
ಮೇ 16ರಂದು ಶಾಂತಿಭಂಗ ಮಾಡಿದ ಆರೋಪದಲ್ಲಿ ಗಿರಿಧರ್ ಸಿಂಗ್ ಬಿಷ್ಟ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಮೇ 21ರಂದು ಅವರು ಬಿಡುಗಡೆ ಹೊಂದಿದರು. ಬಿಡುಗಡೆ ಬಳಿಕ ಅವರು ಮನೆಗೆ ಮರಳದ ಕಾರಣ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಗುರುತು ಸಿಕ್ಕದ ಮೃತದೇಹವೊಂದು ಪತ್ತೆಯಾಗಿತ್ತು. ಅದು ಬಿಷ್ಟ್ ಅವರದ್ದೇ ದೇಹ ಎಂದು ಕುಟುಂಬದವರೂ ಖಚಿತಪಡಿಸಿದರು. ಬಳಿಕ, ಇದೊಂದು ಕೊಲೆ ಎಂಬ ಶಂಕೆ ಆಧರಿಸಿ, ಆರು ಜನರ ಮೇಲೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
ಕುಟುಂಬಸ್ಥರು ಜೂನ್ 13ರಂದು ಬಿಷ್ಟ್ ಅವರ ಅಂತ್ಯಸಂಸ್ಕಾರ, ಮೃತರಾದ ಬಳಿಕ 13ನೇ ದಿನ ನಡೆಸುವ ‘ತೇರಾವಿ’ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ಜೂನ್ 25ರಂದು ಬೆಳಿಗ್ಗೆ 5 ಗಂಟೆಗೆ ಬಿಷ್ಟ್ ಅವರು ಮನೆಗೆ ವಾಪಸಾಗಿ ಅಚ್ಚರಿ ಮೂಡಿಸಿದ್ದಾರೆ.
‘ಬಿಷ್ಟ್ ಅವರು ಮನೆಗೆ ವಾಪಸಾಗಿರುವುದರಿಂದ, ಈ ಹಿಂದೆ ಪತ್ತೆಯಾದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಹಾಗೇ ಉಳಿದಿದೆ. ಈ ಸಂಬಂಧ ತನಿಖೆಯನ್ನು ಮರು ಆರಂಭಿಸಲಾಗಿದ್ದು, ಆರು ಜನರ ಮೇಲೆ ದಾಖಲಾದ ಪ್ರಕರಣವನ್ನೂ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ಅಭಿಷೇಕ್ ಶ್ರೀವಾಸ್ತವ ತಿಳಿಸಿದ್ದಾರೆ.




