ಮಂಗಳೂರು: ಕಾವೂರಿನಿಂದ ಮಂಗಳೂರಿಗೆ ಬರುವ ರಸ್ತೆಯಲ್ಲಿ ಅಂದರೆ ನಗರದ ಕುಂಟಿಕಾನ ಫ್ಲೈಓವರ್ ಬಳಿ ವಾಹನವನ್ನು ಅಡ್ಡಗಟ್ಟಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕುಂಜತ್ತಬೈಲ್ ನಿವಾಸಿ ತನ್ಸೀರ್ (25) ಮತ್ತು ಗದಗ ಜಿಲ್ಲೆ ನರಗುಂದ ತಂಡಾಪುರ ಓಣಿಲೆ ಚಂದ್ರಶೇಖರ್ (55) ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ವಿಚಾರದಲ್ಲಿ ಈ ಇಬ್ಬರ ನಡುವೆ ಗಲಾಟೆಯಾಗಿತ್ತು.ಪರಿಣಾಮ ಇಬ್ಬರೂ ರಸ್ತೆಗೆ ತಮ್ಮ ವಾಹನಗಳನ್ನು ಅಡ್ಡವಾಗಿರಿಸಿ, ಪರಸ್ಪರ ಬೈದಾಡುತ್ತಾ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿ ಇಬ್ಬರನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.




