ಉಡುಪಿ: ಅಮೆಜಾನ್ ಕಂಪನಿಯ ಆನ್ಲೈನ್ ಡೆಲಿವರಿ ಹಬ್ ಪ್ರಾಂಚಸಿ ಕೊಡಿಸುವುದಾಗಿ ನಂಬಿಸಿ 4,20,000 ರೂ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಲ್ಕೂರು ಗ್ರಾಮದ ರವಿಚಂದ್ರ ಇವರಿಗೆ ದಿನಾಂಕ: 29/06/2026 ರಂದು ಎಮ್. ಸಾಯಿಕೃಷ್ಣ ಎಂಬುವವರು ಮೊಬೈಲ್ ಕರೆ ಮಾಡಿದ್ದರು. ಉಡುಪಿ-ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಕಾಂಪ್ಲೆಕ್ಸ್ನಲ್ಲಿ ಅಮೆಜಾನ್ ಆನ್ಲೈನ್ ಹಬ್ ಪ್ರಾಂಚಸಿ ಮಾಡಿಸಿಕೊಡುವುದಾಗಿ ಹೇಳಿದ್ದಾರೆ.
ಮೊದಲಿಗೆ ನಿರಾಕರಿಸಿದ ರವಿಚಂದ್ರ ಅವರು, ಮತ್ತೆ ಬಂದ ಕರೆಯಲ್ಲಿ “ಮೊದಲು ಆನ್ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. ನಂತರ ಕಂಪನಿಯ ಫೀಲ್ಡ್ ಆಫೀಸರ್ ಬಂದು ಒಪ್ಪಂದ ಮತ್ತು ಏರಿಯಾ ಪಿನ್ ಕೋಡ್ ಲಾಕ್ ಮಾಡಿಕೊಡುತ್ತಾರೆ” ಎಂಬ ನಂಬಿಕೆಗೆ ಒಳಗಾಗಿದ್ದಾರೆ.
ಆರೋಪಿಗಳು ಎಮ್. ಸಾಯಿಕೃಷ್ಣ , ಎಮ್. ಗುರುಸ್ವಾಮಿ, ಸುರೇಶ್ ಕುಮಾರ್ ,ರಾಜ್ ಕುಮಾರ್ , ಮಹೇಶ್ ಎಂದು ಗುರುತಿಸಲಾಗಿದೆ.
ಈ ಐವರು ಸೇರಿ ಉಡುಪಿ-ಮಣಿಪಾಲದಲ್ಲಿ ಡೆಲಿವರಿ ಹಬ್ ಪ್ರಾಂಚಸಿ ಮಾಡಿಕೊಡುವುದಾಗಿ ಹೇಳಿ, ಹಂತಹಂತವಾಗಿ ರವಿಚಂದ್ರ ಅವರಿಂದ 4,20,000 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 133/2026 ರಂತೆ BNS ಕಲಂ 316(1), 316(2), 318(1), 318(2), 318(3), 318(4), 319 ಜೊತೆಗೆ 3(5) ರ ಅಡಿ ಕೇಸು ದಾಖಲಿಸಿ ತನಿಖೆ ಆರಂಭಿಸಲಾಗಿದೆ.




