ಬಂಟ್ವಾಳ: ಬಿಸಿರೋಡಿನ ಹೃಯಭಾಗದ ಹೊಟೇಲ್ ಸಹಿತ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದು ತಿಳಿಯಲಾಗಿದೆ.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)
ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಈತ ಕಳೆದ ಎರಡು ವಾರಗಳ ಹಿಂದೆ ಬಿಸಿರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಿದ್ದ ಎನ್ನಲಾಗಿದೆ.
ಇಲ್ಲಿನ ಅನಿಯಾ ದರ್ಬಾರ್ ಹೊಟೇಲ್ ನಿಂದ ಲಕ್ಷಾಂತರ ರೂ.ನಗದು ಕಳವು ಮಾಡಿರುವ ಬಗ್ಗೆ ನಗರ ಪೋಲೀಸ್ ಠಾಣೆಗೆ ಮಾಲಕ ದೂರು ನೀಡಿದ್ದರು.
ಆರೋಪಿ ಹಮೀದ್ ಕಳವು ಮಾಡುವ ವೇಳೆ ಹೊಟೇಲ್ ಒಳಗಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೋಲಿಸ್ ತಂಡ ಬಂಧನಕ್ಕೆ ಕಾರ್ಯತಂತ್ರ ಹೆಣೆದಿದ್ದರು.ಹಮೀದ್ ಮಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದ ವೇಳೆ ಬಂಟ್ವಾಳದಲ್ಲಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು, ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಾರೆಂಟ್ ಆರೋಪಿ ಕೂಡ ಆಗಿರುವುದು ಪೋಲಿಸ್ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ.
ಇದೀಗ ಈತನನ್ನು ಬಂಟ್ವಾಳ ಡಿ.ವೈಎಸ್.ಪಿ.ವಿಜಯಪ್ರಸಾದ್ ಅವರ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ಎಸ್ಐ.ರಾಮಕೃಷ್ಣ ಮತ್ತು ಎಸ್.ಐ.ಕಲೈಮಾರ್ ಅವರ ತಂಡದಲ್ಲಿ ಸಿಬ್ಬಂದಿಗಳಾದ ರಾಜೇಶ್ ಮತ್ತು ಇರ್ಶಾದ್ ಅವರು ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.