ಬೆಳ್ತಂಗಡಿ : ಸ್ಕೂಟರ್ ನಲ್ಲಿ ಹೋಗುತ್ತಿದ್ದ ವಿವಾಹಿತ ಮಹಿಳೆಯನ್ನು ಆಟೋ ಚಾಲಕನೊಬ್ಬ ನಡುರಸ್ತೆಯಲ್ಲಿ ಸ್ಕೂಟರ್ ಅಡ್ಡಹಾಕಿ ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚಾರ್ಮಾಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಸೋಮವಾರ ಸಂಜೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಬಂಟ್ವಾಳ ಗ್ರಾಮದ ಅನಂತಾಡಿ ನಿವಾಸಿ ಮಹಿಳೆ ಶಕುಂತಾಳ(35) ವಿಟ್ಲ ಸಮೀಪದ ಮಾಣಿಯ ನೇರಳಕಟ್ಟೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ ಬಳಿಕ ಆಟೋದಲ್ಲಿ ಬೆಳ್ತಂಗಡಿ ಮೂಲಕ ಚಾರ್ಮಾಡಿ ಘಾಟ್ ಮೂಲಕ ಚಿಕ್ಕಮಗಳೂರು ಕಡೆಗೆ ಪರಾರಿಯಾಗುತ್ತಿದ್ದ ಕೊಲೆ ಮಾಡಿದ ಆರೋಪಿ ಆಟೋ ಚಾಲಕ ಶ್ರೀಧರ್ ಎಂಬತನನ್ನು ವಿಟ್ಲ ಪೊಲೀಸರ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಘಟನೆ ನಡೆದ ಮೂರು ಘಟನೆಯೊಳಗೆ ಚಾರ್ಮಾಡಿಯ ಚೆಕ್ ಪೋಸ್ಟ್ ಬಳಿ ಆಟೋ ಸಮೇತ ವಶಕ್ಕೆ ಪಡೆದು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ದಕ್ಷ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡದ ಮಹಮ್ಮದ್ ಅಸ್ಲಾಂ, ಪ್ರಶಾಂತ್, ಟ್ರಾಫಿಕ್ ಸಿಬ್ಬಂದಿ ಪ್ರವೀಣ್, ಚಾಲಕರಾದ…
Author: main-admin
ವಿಟ್ಲ: ಮಹಿಳೆಯ ಮೇಲೆ ಯುವಕೋರ್ವ ಚೂರಿ ಇರಿದು ಪರಾರಿಯಾದ ಘಟನೆ ನಡೆದಿದೆ. ವಿಟ್ಲದ ಜನಪ್ರಿಯ ಗಾಡರ್ನ್ ಬಳಿ ಈ ಘಟನೆ ನಡೆದಿದೆ. ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಎಂಬ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ. ಚೂರಿ ಇರಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿದೆ. ಸ್ಥಳೀಯರು ಗಾಯಾಳು ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಕುಂತಲಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ. ಚೂರಿ ಇರಿತಕ್ಕೆ ಕಾರಣ ಯಾವುದೆಂದು ತಿಳಿದು ಬಂದಿಲ್ಲ. ಹಲ್ಲೆಗೈದ ಯುವಕ ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, 16 ಐಪಿಎಸ್ ಅಧಿಕಾರಿಗಳನ್ನು ( IPS Officer Transfer ) ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿರುವಂತ ಜೋಷಿ ಶ್ರೀನಾಥ್ ಮಹದೇವ್ ಅವರನ್ನು ವರ್ಗಾವಣೆ ಮಾಡಿ, ಕರ್ನಾಟಕ ಲೋಕಾಯುತ್ತದ ಎಸ್ಪಿಯಾಗಿ ನೇಮಿಸಲಾಗಿದೆ. ಇನ್ನೂ ಬೆಂಗಳೂರು ಸಂಚಾರ ಪೊಲೀಸ್ ನ ಪೂರ್ವ ಡಿಸಿಪಿ ಕೆ.ಎಂ ಶಾಂತರಾಜು ಅವರನ್ನು ಬೆಸ್ಕಾಂ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದಂತ ಸಿ ಕೆ ಬಾಬು ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ ಪಾಟೀಲ್ ಅವರನ್ನು ಬೆಳಗಾವಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸೆಂಟ್ರಲ್ ವಿಭಾಗದ ಎಸಿಪಿಯ ಎಸ್ಪಿ ಶ್ರೀಮತಿ ಕಲಾ ಕೃಷ್ಣಮೂರ್ತಿಯವರನ್ನು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸ್ ಠಾಣೆಯ ಡಿಸಿಪಿಯಾಗಿ ನೇಮಿಸಲಾಗಿದೆ.
ಉಡುಪಿ: ನ್ಯಾಯಾಲಯದ ಮೆಟ್ಟಿಲು ಹತ್ತಲಾಗದ ವೃದ್ಧೆಯ ಬಳಿ ಖುದ್ದು ನ್ಯಾಯಾಧೀಶರೇ ಹಾಜರಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯಲ್ಲಿ ಲೋಕ ಅದಾಲತ್ ವಿಚಾರಣೆಯ ವೇಳೆ ಈ ಒಂದು ಭಾವಪೂರ್ಣ ಘಟನೆ ನಡೆದಿದೆ. 2011ರ ಕೇಸ್ ಒಂದರಲ್ಲಿ 81 ವರ್ಷದ ದೇವಕಿ ಶೆಡ್ತಿ ಕಕ್ಷಿದಾರರಾಗಿದ್ದರು. ಆರೋಗ್ಯ ತೀರಾ ಹದಗೆಟ್ಟು ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದರು. ನ್ಯಾಯಾಲಯದಲ್ಲಿ ಕೇಸು ಮುಂದುವರಿಸಲು ಮಗಳಿಗೆ ಜಿಪಿಎ ನೀಡಿದ್ದರು. ಈ ಬಗ್ಗೆ ಖಚಿತ ಪಡಿಸಲು ದೇವಕಿ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ನ್ಯಾಯಾಲಯದ ಆವರಣದವರೆಗೆ ರಿಕ್ಷಾದಲ್ಲೇ ಅವರು ಬಂದಿದ್ದರು. ಆದರೆ ಕೋರ್ಟ್ ಮೆಟ್ಟಿಲು ಹತ್ತಲಾಗದೆ ಅಸಹಾಯಕರಾಗಿ ಆಟೋದಲ್ಲೇ ಕುಳಿತಿದ್ದರು. ಈ ವಿಷಯ ತಿಳಿದು ಕೂಡಲೇ ನ್ಯಾಯಾಧೀಶ ಜೀತು ಎಸ್.ಆರ್ ಖುದ್ದು ವೃದ್ದೆಯ ಬಳಿ ಬಂದು ವಿಚಾರಿಸಿದರು. ಜಿಪಿಎ ನೀಡಿದ್ದರ ಬಗ್ಗೆ ದೇವಕಿ ಶೆಟ್ಟಿ ಅವರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು. ಅವರ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸಿದರು. ನ್ಯಾಯಾಧೀಶರ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಮಂಗಳೂರು: ಬೆಂಗಳೂರು ಸಂಪರ್ಕಿಸುವ ರಾ. ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಸಂಚಾರ ಬಂದ್ ಮಾಡುವಂತೆ ಕಾಮಗಾರಿ ಟೆಂಡರ್ ವಹಿಸಿರುವ ಸಂಸ್ಥೆಯು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಬೇಡಿಕೆ ಮಂಡಿಸಿದೆ. ಮಾರನಹಳ್ಳಿ- ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ದುರಸ್ತಿಗೆ ರಸ್ತೆ ಬಂದ್ ಮಾಡುವುದು ತೀರಾ ಅಗತ್ಯ ಎಂದು ಗುತ್ತಿಗೆದಾರರರು ಪ್ರತಿಪಾದಿಸಿದ್ದಾರೆ. ಸದ್ಯಕ್ಕೆ ರಸ್ತೆಯನ್ನು ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಉಪ್ಪಿನಂಗಡಿ : ಹೃದಯಾಘಾತಕ್ಕೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ನಲ್ಲಿ ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಯ್ಯ (46) ನಿಧನರಾಗಿದ್ದಾರೆ. ಬೆಳ್ತಂಗಡಿಯ ಕುದ್ರಡ್ಕದ ನಿವಾಸಿಯಾಗಿರುವ ಇವರು ಒಂದೂವರೆ ವರ್ಷಗಳ ಹಿಂದೆ ಗ್ರಾಮಪಂಚಾಯತ್ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದರು. ಕುಮಾರಯ್ಯ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಈ ಹಿನ್ನಲೆ ರಜೆಯಲ್ಲಿದ್ದರು. ಆದರೆ ಭಾನುವಾರ ಎದೆನೋವು ಕಾಣಿಸಿಕೊಂಡಿದ್ದು, ಮನೆಯವರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಬೆಳಗ್ಗಿನ ಜಾವ ನಿಧರಾಗಿದ್ದಾರೆ.
ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರರು ಹುಚ್ಚಾಟ ಹೆಚ್ಚಾಗಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಆಡಿದ್ದೇ ಆಟ, ಹೇಳೋರಿಲ್ಲ-ಕೇಳೋರಿಲ್ಲ ಅನ್ನೋವಂತಾಗಿದೆ. ಜಾರುವ ಬಂಡೆಗಳ ಮೇಲೆ ಪ್ರವಾಸಿಗರು ಹತ್ತಿ ಮೋಜು – ಮಸ್ತಿ ಮಾಡುತ್ತಿದ್ದಾರೆ. ಹೀಗಾಗಿ ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡ್ಕೊಂಡು ಟೂರಿಸ್ಟ್ ಗಳು ಡ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಕೆಲ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋಗೆ ಪೋಸ್ ಕೊಡುತ್ತಿದ್ದಾರೆ. ಈ ವೇಳೆ ಸ್ವಲ್ಪ ಯಾಮಾರಿ ಜಾರಿ ಬಿದ್ದರೂ ಕೈ-ಕಾಲುಗಳಿಗೆ ಗಾಯಗಳಾಗುವ ಸಾಧ್ಯತೆಗಳಿವೆ. ಈ ಹಿಂದೆ ಬಿದ್ದು ಕೈ-ಕಾಲು ಮುರ್ಕೊಂಡು, ತಲೆ ಹೊಡೆದುಕೊಂಡಿರುವ ಹಾಗೂ ಪ್ರಾಣವೂ ಹೋದ ಉದಾಹರಣೆಗಳು ಸಾಕಷ್ಟಿವೆ. ರಸ್ತೆ ಮಧ್ಯೆ ಯುವಕ-ಯುವತಿಯ ಮೋಜು-ಮಸ್ತಿಗೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.
ಉಡುಪಿ : ಮಲ್ಪೆ ಬೀಚ್ನಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಲೈಫ್ಗಾರ್ಡ್ ತಂಡ ರಕ್ಷಿಸಿರುವ ಘಟನೆ ಇಂದು ಸಂಜೆ ನಡೆದಿದೆ. 30 ವರ್ಷ ಪ್ರಾಯದ ಮಹಿಳೆಯೊಬ್ಬರು ಮಲ್ಪೆ ಬೀಚ್ಗೆ ತನ್ನ ಮಗನೊಂದಿಗೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ಮಾಡುವ ಉದ್ದೇಶದಿಂದ ಆ ಮಹಿಳೆ ಸಮುದ್ರದ ನೀರಿನತ್ತ ಓಡುತ್ತಿದ್ದರೆನ್ನಲಾಗಿದೆ. ಇದನ್ನು ಸ್ಥಳದಲ್ಲಿದ್ದ ಜೀವರಕ್ಷಕ ದಳದವರು ಗಮನಿಸಿದ್ದು, ತಕ್ಷಣವೇ ಆ ಮಹಿಳೆಯನ್ನು ರಕ್ಷಿಸಿ ತೀರಕ್ಕೆ ಕರೆತಂದರು. ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಬಳಿಕ ಆ ಮಹಿಳೆ ಮತ್ತು ಮಗನನ್ನು ಜೀವರಕ್ಷಕ ದಳದವರು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉಪ್ಪಿನಂಗಡಿ; ಪೋಕ್ಸೋ ಪ್ರಕರಣದ ಆರೋಪಿ ಕಲ್ಲೇರಿ ನಿವಾಸಿ ಮೈಸೂರಿನಲ್ಲಿ ಅರೆಸ್ಟ್ ಉಪ್ಪಿನಂಗಡಿ; ಫೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್(21) ಎಂದು ಗುರುತಿಸಲಾಗಿದೆ. ಮುನಾಸಿರ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಮಂಗಳೂರು: ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಬಳಿ ಅರಬ್ಬಿ ಸಮುದ್ರದಲ್ಲಿ ವಿದೇಶಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ತೈಲ ಸೋರಿಕೆ ಆತಂಕ ಎದುರಾಗಿದೆ. ಸಿರಿಯಾದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಚೀನಾದಿಂದ ಲೆಬನಾನ್ ಗೆ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಸುಮಾರು 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದಾಗಿ ಅರಬ್ಬಿ ಸಮುದ್ರದಲ್ಲಿ ಜೂನ್ 23ರಂದು ಮುಳುಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ 15 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಆದರೆ ಇದೀಗ ಹಡಗಿನಿಂದ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ. ಇದರಿಂದ ಮತ್ಸ್ಯ ಸಂಕುಲ ನಾಶವಾಗುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೋಸ್ಟ್ ಗಾರ್ಡ್ ಕಟ್ಟೆಚ್ಚರ ಘೋಷಣೆ ಮಾಡಿದೆ. ಮತ್ತೊಂದೆಡೆ ತೈಲ ಸೋರಿಕೆಯಾದರೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಭೆ ನಡೆಸಲಾಗುತ್ತಿದೆ.